"ದಿಗಿಲ್" ಸಿನಿಮಾದ ಚಿತ್ರೀಕರಣ ಮುಕ್ತಾಯ


ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್‌ ಮುಂಡಾಡಿ

 ಮಂಗಳೂರು: ಚೇತನ್ ಮುಂಡಾಡಿ ನಿರ್ದೇಶನದ "ದಿಗಿಲ್" ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಸಿನಿಮಾ ಡಬ್ಬಿಂಗ್ ನಲ್ಲಿ ನಿರತವಾಗಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ ಚೇತನ್‌ ಮುಂಡಾಡಿ ಇದೀಗ ಮತ್ತೊಂದು ಚಿತ್ರದೊಂದಿಗೆ ಸಿನಿ ಪ್ರಿಯರ ಮುಂದೆ ಬಂದಿದ್ದಾರೆ. ಅದುವೇ ʼದಿಗಿಲ್‌ʼ
ಈ ಬಾರಿ ಚೇತನ್‌ ಮುಂಡಾಡಿ ಅವರು ತುಳುನಾಡಿನಲ್ಲಿ ಆರಾಧಿಸುವ ಜುಮಾದಿ ಬಂಟ ದೈವದ ಕಥೆಯನ್ನು ತೆರೆಯ ಮೇಲೆ ತರುತ್ತಿದ್ದಾರೆ. ಜುಮಾದಿ ಬಂಟ ದೈವ ಮತ್ತು ಮಂಗಳಮುಖಿಯ ನಡುವಿನ ಕಥಾನಕವನ್ನು ಹೇಳಲು ಹೊರಟಿದ್ದಾರೆ.

ಈ ಬಗ್ಗೆ ಮಾತನಾಡುವ ಅವರು, “ʼದಿಗಿಲ್‌ʼ ಹೊಸತನದ ಕಥೆ. ಸತ್ಯ ಘಟನೆಯೊಂದರ ಕಥೆಯನ್ನು ಇಲ್ಲಿ ಹೇಳಲು ಹೊರಟಿದ್ದೇವೆ. ಇದು ಈ ಮಣ್ಣಿನ ಕಥೆ. ಆದರೆ ಹಿಂದೆಂದೂ ಕೇಳಿರದ ಕಥೆ ಇಲ್ಲಿದೆ” ಎನ್ನುತ್ತಾರೆ.

ʼದಿಗಿಲ್‌ʼ ಎಂದರೆ ಭಯ ಎಂದರ್ಥ. ಚಿತ್ರವು ತುಳು, ಕನ್ನಡ ಮತ್ತು ಮಲಯಾಳಂ ಹೀಗೆ ಮೂರು ಭಾಷೆಯಲ್ಲಿ ಬರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಬಳಂಜ, ಪುಂಜಾಲಕಟ್ಟೆ, ಮಡಂತ್ಯಾರು ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಸದ್ಯ ಶೂಟಿಂಗ್‌ ಮುಗಿಸಿರುವ ದಿಗಿಲ್‌ ಚಿತ್ರತಂಡ ಡಬ್ಬಿಂಗ್‌ ನಲ್ಲಿ ನಿರತವಾಗಿದೆ. ಜನವರಿ ವೇಳೆಗೆ ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ.

ರಾಮ್‌ ಮೂವೀಸ್‌ ಮತ್ತು ಎಂ.ಆರ್.ಪಿ ಎಂಟರ್ಟೈನ್‌ ಮೆಂಟ್‌ ಬ್ಯಾನರ್‌ ನಲ್ಲಿ ಮೈಸೂರು ರಮೇಶ್‌ ಮತ್ತು ರವಿಶಂಕರ್‌ ಪೈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚೇತನ್‌ ರೈ ಮಾಣಿ, ಶೋಭಾ ಶೆಟ್ಟಿ, ಅಗ್ನಿಸಾಕ್ಷಿ ಖ್ಯಾತಿ ಅಮಿತ್‌ ರಾವ್‌, ರಮೇಶ್‌ ರೈ ಕುಕ್ಕುವಳ್ಳಿ, ಪುಷ್ಪರಾಜ್  ಬೊಳ್ಳಾರ್, ರೂಪ ಡಿ ಶೆಟ್ಟಿ, ಸರೋಜಿನಿ ಶೆಟ್ಟಿ, ಬಾಬಾ ಪ್ರಸಾದ್ ಅರಸ ಕುತ್ಯಾರ್, ನಾಗರಾಜ್ ರಾವ್ ವರ್ಕಾಡಿ, ಎಮ್ ಕೆ ಮಠ, ನಾರಾಯಣ ಶಾಬಾರಾಯ, ಅನಿಷ್ ಪೂಜಾರಿ ವೇಣೂರು, ಎಚ್ ಕೆ ನಯನಾಡು, ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿರುವ ಚೇತನ್‌ ಮುಂಡಾಡಿ ಅವರೊಂದಿಗೆ ಎಚ್‌ ಕೆ ನೈನಾಡ್‌ ಅವರು ಸಂಭಾಷಣೆ ಬರೆದಿದ್ದಾರೆ. ಮಣಿಕಾಂತ್‌ ಕದ್ರಿ ಸಂಗೀತವಿದ್ದು, ಪದ್ಮನಾಭನ್‌ ಮಣಿ ಕ್ಯಾಮರಾ ಕೈಚಳಕವಿದ್ದು, ಕೀರ್ತರಾಜ್ ಡಿ ಸಂಕಲನವಿದೆ.
BREAKING NEWS
Loading latest news...
Join our WhatsApp Channel Powered By : Online Pudu