ಮಂಗಳೂರು: ಆಸ್ಪತ್ರೆಗೆ ಬಂದಾಗ ಮೃತಪಟ್ಟ ಮಹಿಳೆಯೊಬ್ಬರ ಮೃತದೇಹದಿಂದಲೇ ಲಕ್ಷಾಂತರ ರೂಪಾಯಿ ಮೌಲ್ಯದ ಮಾಂಗಲ್ಯ ಸರವನ್ನು ಕಳವು ಮಾಡಿರುವ ಅಮಾನವೀಯ ಘಟನೆ ಕರಾವಳಿಯ ಪ್ರಸಿದ್ಧ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಮೃತರ ಪತಿ ಸುಂದರ ಎಂಬವರು ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಡೆದಿದ್ದೇನು?
ಜುಲೈ 26 ರಂದು ಬೆಳಿಗ್ಗೆ 8:00 ಗಂಟೆ ಸುಮಾರಿಗೆ ಜಾನಕಿ (53) ಎಂಬವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರ ಪತಿ ಸುಂದರ ಆಟೋರಿಕ್ಷಾದಲ್ಲಿ ಪತ್ನಿಯನ್ನು ಸಿಟಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಲ್ಲಿ ಸೂಕ್ತ ವೈದ್ಯರಿಲ್ಲದ ಕಾರಣ, ತಕ್ಷಣವೇ ವೆನ್ಲಾಕ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಿದ್ದಾರೆ.
ವೈದ್ಯರು ಪರೀಕ್ಷೆ ನಡೆಸಿ ಜಾನಕಿ ಅವರು ಈಗಾಗಲೇ ಮೃತಪಟ್ಟಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಮೃತದೇಹದಲ್ಲಿದ್ದ ಆಭರಣ ನಾಪತ್ತೆ:
ಪತ್ನಿಯನ್ನು ಆಸ್ಪತ್ರೆಗೆ ಕರೆತರುವಾಗ ಅವರ ಕೊರಳಿನಲ್ಲಿ 16 ಗ್ರಾಂ ಚಿನ್ನದ ಗುಂಡುಗಳನ್ನೊಳಗೊಂಡ ಒಟ್ಟು 32 ಗ್ರಾಂ ತೂಕದ (ಅಂದಾಜು ಮೌಲ್ಯ ₹1.50 ಲಕ್ಷ) ಮಾಂಗಲ್ಯ ಸರವಿತ್ತು. ಆದರೆ ಮೃತದೇಹವನ್ನು ನೋಡಿದಾಗ ಕೊರಳಿನಲ್ಲಿದ್ದ ಕರಿಮಣಿ ಸರ ಮಾಯವಾಗಿತ್ತು.
ದುಃಖದಲ್ಲಿದ್ದ ಕುಟುಂಬಸ್ಥರು, ಆಸ್ಪತ್ರೆಯಲ್ಲೇ ಯಾರೋ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
