ಮುಂಬೈ: ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆಗೆ ಗೌರವ ಸೂಚಿಸುವ ಸಲುವಾಗಿ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ತಮ್ಮ ರೆಡ್ ಕಾರ್ಪೆಟ್ ನಡಿಗೆಯನ್ನು ಅರ್ಧದಲ್ಲೇ ನಿಲ್ಲಿಸಿ, ಗಂಭೀರವಾಗಿ ನಿಂತುಕೊಂಡ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಮುಂಬೈನಲ್ಲಿ ಆಯೋಜಿಸಲಾಗಿದ್ದ ‘ಸರ್ವೋತ್ತಮ ನಾಗರಿಕ ಸಮ್ಮಾನ್ 2026’ ಸಮಾರಂಭದ ರೆಡ್ ಕಾರ್ಪೆಟ್ ಪ್ರವೇಶದ ವೇಳೆ ಈ ಘಟನೆ ನಡೆದಿದೆ. ವೇದಿಕೆಯತ್ತ ಹೆಜ್ಜೆ ಹಾಕುತ್ತಿದ್ದ ಭೂಮಿ ಪೆಡ್ನೇಕರ್, ಹಿನ್ನೆಲೆಯಲ್ಲಿ ರಾಷ್ಟ್ರಗೀತೆ ಮೊಳಗುತ್ತಿದ್ದಂತೆ ತಕ್ಷಣವೇ ಫೋಟೋಗ್ರಾಫರ್ಗಳಿಗೆ “ಒಂದು ಸೆಕೆಂಡ್, ರಾಷ್ಟ್ರಗೀತೆ...” ಎಂದು ನಿಲ್ಲುವಂತೆ ಸೂಚಿಸಿದರು. ಬಳಿಕ ಪಕ್ಕಕ್ಕೆ ಸರಿದು, ರಾಷ್ಟ್ರಗೀತೆ ಮುಕ್ತಾಯವಾಗುವವರೆಗೆ ಅಟೆನ್ಷನ್ ಭಂಗಿಯಲ್ಲಿ ಗೌರವ ಸಲ್ಲಿಸಿ, ನಂತರವೇ ತಮ್ಮ ರೆಡ್ ಕಾರ್ಪೆಟ್ ನಡಿಗೆಯನ್ನು ಮುಂದುವರಿಸಿದರು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಖಾಸಗಿ ಪ್ರಚಾರ ಮತ್ತು ಗ್ಲಾಮರ್ಗಿಂತ ದೇಶದ ಗೌರವಕ್ಕೆ ಮೊದಲ ಆದ್ಯತೆ ನೀಡಿದ ನಟಿಯ ಸಮಯಪ್ರಜ್ಞೆಗೆ ನೆಟ್ಟಿಗರು ‘ಮೊದಲು ದೇಶ’, ‘ಭೂಮಿಗೆ ಸಲಾಂ’ ಎಂದು ಕೊಂಡಾಡುತ್ತಿದ್ದಾರೆ.
ಚಿತ್ರರಂಗ ಮತ್ತು ಸಾಮಾಜಿಕ ಕಾರ್ಯಗಳು: ಇತ್ತೀಚಿನ ದಿನಗಳಲ್ಲಿ ಭೂಮಿ ಪೆಡ್ನೇಕರ್ ನಟನೆಯ ‘ಮೇರೆ ಹಸ್ಬೆಂಡ್ ಕಿ ಬೀವಿ’, ‘ಖೇಲ್ ಖೇಲ್ ಮೇನ್’, ‘ದಿ ಲೇಡಿ ಕಿಲ್ಲರ್’ ಸಿನಿಮಾಗಳು ಹಾಗೂ ‘ದಲ್ದಲ್’ ವೆಬ್ ಸರಣಿಗಳು ನಿರೀಕ್ಷಿತ ಯಶಸ್ಸು ಕಾಣದಿದ್ದರೂ, ಸಾಮಾಜಿಕ ಕಳಕಳಿಯ ವಿಚಾರಗಳಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ. ಈ ಹಿಂದೆ ಸಿಜೆಪಿ ಪ್ರತಿಭಟನೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪ್ರತಿಭಟನಾಕಾರರು ಬಳಸಿದ ಭಾಷೆಯನ್ನು ಖಂಡಿಸಿ ಟ್ರೋಲ್ಗೆ ಒಳಗಾಗಿದ್ದ ಅವರು, ಅಸ್ಸಾಂ ಪ್ರವಾಹ ಪರಿಹಾರ ಕಾರ್ಯಗಳಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿದ್ದರು. ಇದೀಗ ರಾಷ್ಟ್ರಗೀತೆಗೆ ಗೌರವ ನೀಡಿದ ಈ ನಡೆ ಸಾರ್ವಜನಿಕರಲ್ಲಿ ಅವರ ಬಗೆಗಿನ ಮೆಚ್ಚುಗೆಯನ್ನು ಮತ್ತಷ್ಟು ಹೆಚ್ಚಿಸಿದೆ.
