ಬೆಂಗಳೂರು: ಲಿವಿನ್ ರಿಲೇಷನ್ಶಿಪ್ನಲ್ಲಿದ್ದವರು ಸಾವಿಗೆ ಶರಣಾಗುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಶ್ರೀಗಂಧ ನಗರದಲ್ಲಿ ಇಂತಹದ್ದೇ ಪ್ರಕರಣವೊಂದು ನಡೆದಿದ್ದು, ರೀಲ್ಸ್ರಾಣಿಯ ಕಾಟಕ್ಕೆ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಚಿತ್ರದುರ್ಗ ಮೂಲದ ತಿಪ್ಪೇಸ್ವಾಮಿ (28) ಎಂಬ ಯುವಕ ಮೃತಪಟ್ಟ ಯುವಕ.
ತಿಪ್ಪೇಸ್ವಾಮಿ ಹಾಗೂ ದಾವಣಗೆರೆ ಮೂಲದ ಮಹಿಳೆ ಇನ್ಸ್ಟಾಗ್ರಾಮ್ನಲ್ಲಿ ಪರಿಚಿತರಾಗಿದ್ದರು. ಈಕೆ ರೀಲ್ಸ್ ಮಾಡುವುದರಲ್ಲಿ ಸಕ್ರಿಯಳಾಗಿದ್ದು, ಇಬ್ಬರೂ ಒಂದೇ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದರು. ಪತಿ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ಬಂದಿದ್ದ ಈಕೆ, ಕಳೆದ ಎರಡು ತಿಂಗಳಿನಿಂದ ತಿಪ್ಪೇಸ್ವಾಮಿಯೊಂದಿಗೆ ಶ್ರೀಗಂಧನಗರದ ಬಾಡಿಗೆ ಮನೆಯಲ್ಲಿ ಲಿವಿನ್ ರಿಲೇಷನ್ಶಿಪ್ನಲ್ಲಿದ್ದಳು. ಮನೆ ಮಾಲೀಕರಿಗೆ ತಾವು ದಂಪತಿಗಳೆಂದು ಸುಳ್ಳು ಹೇಳಿ ವಾಸವಿದ್ದರು ಎನ್ನಲಾಗಿದೆ.
ಆದರೆ ಬಳಿಕ ಆಕೆ ತಗಾದೆ ತೆಗೆಯಲು ಆರಂಭಿಸಿದ್ದಾಳೆ. 'ನಿನಗೆ ತನ್ನನ್ನು ಮೇಂಟೇನ್ ಮಾಡಲು ನಿನ್ನಿಂದ ಸಾಧ್ಯವಿಲ್ಲ, ನನ್ನನ್ನು ಬಿಟ್ಟು ಹೋಗು' ಎಂದು ಮಹಿಳೆ ತಿಪ್ಪೇಸ್ವಾಮಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಮನನೊಂದ ತಿಪ್ಪೇಸ್ವಾಮಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ಕುಟುಂಬಸ್ಥರು ಮಹಿಳೆಯ ಕಿರುಕುಳವೇ ಸಾವಿಗೆ ನೇರ ಕಾರಣ ಎಂದು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸದ್ಯ ಘಟನೆ ನಡೆದ ಬಳಿಕ ಮಹಿಳೆ ನಾಪತ್ತೆಯಾಗಿದ್ದು, ಪೊಲೀಸರು ಆಕೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ರಾಜಗೋಪಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.