ಬಂಟ್ವಾಳ: ಬಾವಿಗಿಳಿದ ಕಾರ್ಮಿಕರಿಬ್ಬರು ಆಮ್ಲಜನಕದ ಕೊರತೆಯಿಂದ ಅಪಮೃತ್ಯು

ಬಂಟ್ವಾಳ: ಬಾವಿಗಿಳಿದು ಕೆಲಸ ಮಾಡುತ್ತಿದ್ದ ಕಾರ್ಮಿಕರಿಬ್ಬರು ಆಮ್ಲಜನಕದ ಕೊರತೆಯಿಂದ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ಮಂಗಳವಾರ ನಡೆದಿದೆ.

ಕುಕ್ಕಿಲ ನಿವಾಸಿ ಸದ್ಯ ಪರ್ತಿಪ್ಪಾಡಿ ವಾಸಿಯಾಗಿರುವ ಇಬ್ರಾಹಿಂ ಹಾಗೂ ಮಲಾರ್ ನಿವಾಸಿ ಆಲಿ ಮೃತಪಟ್ಟ ದುರ್ದೈವಿಗಳು.



ಕೇಪು ಗ್ರಾಮದ ಅಳಕೆ ಸಮೀಪ ಪಡಿಬಾಗಿಲಿನಲ್ಲಿ ಸುಮಾರು 30 ಅಡಿ ಆಳದ ಬಾವಿಗೆ ರಿಂಗ್ ಹಾಕಿ ಬಳಿಕ ಬಾವಿಯನ್ನು ಶುಚಿಗೊಳಿಸಲು ಓರ್ವ ಕಾರ್ಮಿಕ ಬಾವಿಗಿಳಿದಿದ್ದರು. ಆದರೆ ಕೆಳಗಿಳಿದ ಕಾರ್ಮಿಕ ಮೇಲೆ ಬರಲಾರದೆ ಒದ್ದಾಡುತ್ತಿದ್ದಾಗ ಮತ್ತೋರ್ವ ಕಾರ್ಮಿಕ ಅವರನ್ನು ಮೇಲಕ್ಕೆತ್ತಲು ಬಾವಿಗಿಳಿದಿದ್ದಾರೆ. ಆದರೆ ಅವರಿಗೂ ಅದೇ ಸ್ಥಿತಿಯುಂಟಾಗಿದೆ. ಕೆಳಗಿಳಿದ ಇಬ್ಬರೂ ಆಮ್ಲಜನಕದ ಕೊರತೆ ಇಬ್ಬರೂ ಮೇಲೆಬಾರಲಾಗದೆ ಸಾವನ್ನಪ್ಪಿದ್ದಾರೆ.

ತಕ್ಷಣ ಸ್ಥಳಿಯರ ಸಹಾಯದಿಂದ ಫ್ರೆಂಡ್ಸ್ ವಿಟ್ಲ ಮುರಳೀಧರ ಅವರ ನೇತೃತ್ವದ ತಂಡ ಎರಡು ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ. ಮೃತದೇಹಗಳನ್ನು ವಿಟ್ಲ ಸಮುದಾಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಇಬ್ರಾಹಿಂ ಕಳೆದ 20 ವರ್ಷಗಳಿಂದ ರಿಂಗ್ ಹಾಕುವಲ್ಲಿ ಪರಿಣಿತರಾಗಿದ್ದರು. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.