ಮಡಿಕೇರಿ: ಹೆತ್ತತಾಯಿಯ ಕಣ್ಣೆದುರೇ ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆ ಕೊಡಗು ಜಿಲ್ಲೆಯ ಬೆಟ್ಟತ್ತೂರು ಗ್ರಾಮದಲ್ಲಿ ನಡೆದಿದೆ.
ಬೆಟ್ಟತ್ತೂರು ಗ್ರಾಮದ ಗಿರೀಶ್ ಅವರ ಪುತ್ರಿ ಪೂಜಾ(17) ಮೃತಪಟ್ಟ ದುರ್ದೈವಿ.
ಮಡಿಕೇರಿಯ ಸಂತ ಮೈಕಲರ ಶಾಲೆಯಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಪೂಜ್ಯ ಸಂಜೆ ತನ್ನ ತಂದೆ-ತಾಯಿಯೊಂದಿಗೆ ಬೈಕ್ನಲ್ಲಿ ಬಂದಿದ್ದಾರೆ. ಬೈಕ್ನಿಂದ ಇಳಿದಿದ್ದೇ ತಡ ಅಷ್ಟರಲ್ಲಿ ಕತ್ತಲಿನಲ್ಲಿ ಹಿಂಬಂದಿಯಿಂದ ದಾಳಿ ನಡೆಸಿದ ಕಾಡಾನೆ, ಪೂಜ್ಯಳ ದೇಹವನ್ನು ತುಳಿದು ಸ್ಥಳದಲ್ಲೇ ಸಾಯಿಸಿದೆ. ಪುತ್ರಿಯ ಕಿರುಚಾಟ ಕಂಡು ತಾಯಿ ಎಷ್ಟೇ ಬೊಬ್ಬೆ ಹೊಡೆದರೂ ಪ್ರಯೋಜನವಾಗಿಲ್ಲ, ಕ್ಷಣಾರ್ಧದಲ್ಲಿ ಕಾಡಾನೆ ವಿದ್ಯಾರ್ಥಿನಿಯ ಜೀವ ತೆಗೆದಿದೆ.
ಆನೆ ದಾಳಿಯಿಂದ ವಿದ್ಯಾರ್ಥಿನಿ ಬಲಿಯಾಗಿದ್ದಕ್ಕೆ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲಾಖೆಯಿಂದ ಪರಿಹಾರ ಕೊಡುವಂತೆ ಮತ್ತು ಕಾಡಾನೆ ಸೆರೆಹಿಡಿಯುವಂತೆ ಆಗ್ರಹಿಸಿದ್ದಾರೆ. ಬೆಟ್ಟತ್ತೂರಿನ ಸುತ್ತಮುತ್ತ ಆನೆಗಳು ಓಡಾಡುತಿದ್ದು ಆನೆ ದಾಳಿ ತಡೆಯಲು ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಆನೆ ಮತ್ತು ಮಾನವ ಸಂಘರ್ಷ ಹೆಚ್ಚುತ್ತಿದ್ದು ಸರ್ಕಾರ ಕೂಡಲೇ ಇದಕ್ಕೆ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅರಣ್ಯ ಅಧಿಕಾರಿಗಳು ಒಂದು ಬಾರಿ ಗ್ರಾಮಕ್ಕೆ ಬಂದಿದ್ದರೂ, ಆನೆಗಳನ್ನು ಓಡಿಸುವಲ್ಲಿ ಪ್ರಯತ್ನಿಸಿಲ್ಲ. ಈ ಭಾಗದಲ್ಲಿ ಕಾಡಾನೆ ಓಡಾಡುತ್ತಿದ್ದು ಕಾಫಿ ತೋಟಗಳಲ್ಲಿ ಕಾಫಿ ಮತ್ತು ತೋಟದ ಕೆಲಸ ಮಾಡಿಸಲು ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ.