ಮಂಗಳೂರು: ಬ್ರೇಕ್ ಫೈಲ್ ಆದ ಬಸ್ಸೊಂದು ಫುಟ್ಪಾತ್ ಏರಿ ರಸ್ತೆ ಬದಿಯ ಕಂಪೌಂಡ್ಗೆ ಡಿಕ್ಕಿಯಾಗಿ ನಿಂತ ಘಟನೆ ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಸೋಮವಾರ ನಡೆದಿದೆ.
ಮಂಗಳೂರು - ಮಣಿಪಾಲ ನಡುವೆ ಸಂಚರಿಸುವ ಭಾರತಿ ಎಂಬ ಎಕ್ಸ್ಪ್ರೆಸ್ ಬಸ್ ಮಂಗಳೂರಿನ ಉರ್ವಸ್ಟೋರ್ ಎಂಬಲ್ಲಿಂದ ಕೊಟ್ಟಾರ ಕಡೆಗೆ ಬರುತ್ತಿತ್ತು. ಈ ವೇಳೆ ಏಕಾಏಕಿ ಬಸ್ನ ಬ್ರೇಕ್ಫೈಲ್ ಆಗಿದೆ. ಪರಿಣಾಮ ಬಸ್ ಎಲ್ಲೂ ನಿಲ್ಲದೆ ನೇರ ಬರಲಾರಂಭಿಸಿದೆ. ವಿಷಯ ತಿಳಿದು ಕೊಟ್ಟಾರ ಇನ್ಫೋಸಿಸ್ ಕಟ್ಟಡದ ಮುಂಭಾಗ ಬಸ್ ನಿರ್ವಾಹಕ ಬಸ್ನಿಂದ ಹಾರಿದ್ದಾನೆ. ಕೊಟ್ಟಾರದ ಬಳಿಕ ರಸ್ತೆ ಇಳಿಜಾರು ಆಗಿದ್ದು, ಅದೃಷ್ಟವಶಾತ್ ಯಾವುದೇ ವಾಹನಗಳಿಗೆ ಡಿಕ್ಕಿ ಹೊಡೆಯದೆ ಬಸ್ ಚೌಕಿಯಲ್ಲಿ ಫುಟ್ಪಾತ್ ಏರಿ ನಿಂತು ಆವರಣ ಗೋಡೆಯೊಂದಕ್ಕೆ ಢಿಕ್ಕಿ ಹೊಡೆದು ನಿಂತಿದೆ.
ಬಸ್ ಫುಟ್ಪಾತ್ ಏರಿದಲ್ಲಿಯೇ ವಿದ್ಯುತ್ ಕಂಬ ಇದ್ದು, ಅದಕ್ಕೆ ಢಿಕ್ಕಿ ಹೊಡೆದಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಜನ ಓಡಾಡುವ ಪ್ರದೇಶದಲ್ಲೇ ಬಸ್ ಫುಟ್ಪಾತ್ ಏರಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಘಟನೆಯಲ್ಲಿ ಬಸ್ಸಿನ ಮುಂಭಾಗದ ಜಖಂಗೊಂಡಿದ್ದು, ಆವರಣ ಗೋಡೆ ಕುಸಿದು ಬಿದ್ದಿದೆ. ಘಟನೆಯ ಸಂಪೂರ್ಣ ದೃಶ್ಯ ಹಿಂಭಾಗದಲ್ಲಿ ಬರುತ್ತಿದ್ದ ಡ್ಯಾಶ್ಬೋರ್ಡ್ ಕ್ಯಾಮರಾದಲ್ಲಿ ಸೆರೆಯಾಗಿದೆ.