ಮಂಗಳೂರು: ನಾಯಿಯನ್ನು ತಪ್ಪಿಸಲು ಹೋಗಿ ರಸ್ತೆಬದಿಯ ಕಂಬಕ್ಕೆ ಸ್ಕೂಟರ್ ಢಿಕ್ಕಿಯಾದ ಪರಿಣಾಮ ಇಂಜಿನಿಯರಿಂಗ್ ವಿದ್ಯಾರ್ಥಿ ದಾರುಣವಾಗಿ ಮೃತಪಟ್ಟ ಘಟನೆ ಬಿಕರ್ನಕಟ್ಟೆ ಬಳಿ ಸಂಭವಿಸಿದೆ.
ಕುಲಶೇಖರ ನಿವಾಸಿ, ವಾಮಂಜೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಟೆರೆನ್ಸ್ ಡಿಸೋಜ(21) ಮೃತಪಟ್ಟ ದುರ್ದೈವಿ.
ಟೆರೆನ್ಸ್ ಡಿಸೋಜ ಗುರುವಾರ ರಾತ್ರಿ 10ಗಂಟೆಗೆ ತನ್ನ ಹೆತ್ತವರೊಂದಿಗೆ ಕುಲಶೇಖರ ಕೋರ್ಡೆಲ್ ಚರ್ಚ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಬಳಿಕ ಪಡೀಲ್ ನ ಪೆಟ್ರೋಲ್ ಬಂಕ್ ಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದರು. ಆದರೆ ಬಿಕರ್ನಕಟ್ಟೆಯ ಫ್ಲೈ ಓವರ್ ಬಳಿ ಸರ್ವಿಸ್ ರಸ್ತೆಯಲ್ಲಿ ಸ್ಕೂಟರ್ ನಲ್ಲಿ ಹೋಗುತ್ತಿದ್ದ ವೇಳೆ ನಾಯಿಯೊಂದು ಅಡ್ಡ ಬಂದಿದೆ. ಅದನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ತಡೆಯಾಗಿ ಹಾಕಲಾಗಿದ್ದ ಕಂಬಕ್ಕೆ ಇವರಿದ್ದ ಸ್ಕೂಟರ್ ಢಿಕ್ಕಿ ಹೊಡೆದಿದೆ. ಹೆಲ್ಮೆಟ್ ಧರಿಸದ ಪರಿಣಾಮ ತಲೆಗೆ ಗಂಭೀರ ಗಾಯಗೊಂಡಿದ್ದ ಟೆರೆನ್ಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.