'ಬಿಜೆಪಿ ನನ್ನ ಹೇಳಿಕೆಯನ್ನು ತಿರುಚಿದೆ' - ‘ಸನಾತನ ಧರ್ಮ’ದ ವಿರುದ್ಧದ ಹೇಳಿಕೆಗೆ ಸಮರ್ಥನೆ ನೀಡಿದ ಉದಯನಿಧಿ ಸ್ಟಾಲಿನ್

ಚೆನ್ನೈ: ‘ಸನಾತನ ಧರ್ಮ’ದ ಬಗ್ಗೆ ನಾನು ಹೇಳಿರುವ ಹೇಳಿಕೆಗಳನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ತಿರುಚಿ ದೊಡ್ಡದು ಮಾಡಿದೆ. ಇಡೀ ಭಾರತವೇ ನನ್ನ ಬಗ್ಗೆ ಮಾತನಾಡುವಂತೆ ಮಾಡುವುದು ಅವರ ಉದ್ದೇಶವಾಗಿತ್ತು ಎಂದು ಡಿಎಂಕೆ ಮುಖಂಡ, ಸಚಿವ ಉದಯನಿಧಿ ಸ್ಟಾಲಿನ್ ಆರೋಪಿಸಿದರು.

ಕರೂರು ಜಿಲ್ಲೆಯಲ್ಲಿ ನಡೆದ ಯುವ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಉದಯನಿಧಿ, ಸನಾತನ ಧರ್ಮವನ್ನು ಸೊಳ್ಳೆ, ಡೆಂಗ್ಯೂ, ಮಲೇರಿಯಾ, ಜ್ವರ ಮತ್ತು ಕರೋನಾಗೆ ಹೋಲಿಸಿದ್ದೇನೆ. ಅದರ ನಿರ್ಮೂಲನೆಗೆ ಎಲ್ಲರೂ ಮುಂದಾಗಬೇಕು ಎಂದು ಈ ಹಿಂದೆ ಹೇಳಿರುವ ಹೇಳಿಕೆಯಿಂದ ಉಂಟಾದ ಕೋಲಾಹಲಕ್ಕೆ ಅವರು ಪ್ರತಿಕ್ರಿಯೆ ನೀಡಿದರು. ಮಧ್ಯಪ್ರದೇಶದ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ‘ಉದಯನಿಧಿ ಸ್ಟಾಲಿನ್ ನರಮೇಧಕ್ಕೆ ಕರೆ ನೀಡಿದ್ದಾನೆ’ ಎಂದು ನನ್ನ ಮಾತುಗಳನ್ನು ತಪ್ಪಾಗಿ ನಿರೂಪಿಸಿದ್ದಾರೆ. ಆದರೆ ನಾನು ‘ಯಾವುದೇ ತಾರತಮ್ಯವಿಲ್ಲದೆ ಎಲ್ಲರನ್ನು ಸಮಾನವಾಗಿ ಪರಿಗಣಿಸಬೇಕು. ಇಲ್ಲದಿದ್ದಲ್ಲಿ ತಾರತಮ್ಯವನ್ನು ನಿರ್ಮೂಲನೆ ಮಾಡಬೇಕು’ ಎಂದು ಹೇಳಿದ್ದೆ. ಆದರೆ ಮೋದಿಯವರು ಅದನ್ನು ತಿರುಚಿ, ಹಿಗ್ಗಿಸಿ ಇಡೀ ಭಾರತ ನನ್ನ ಬಗ್ಗೆ ಮಾತನಾಡುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ತನ್ನ ಹೇಳಿಕೆಯಿಂದ ಎದುರಿಸಿದ ಭಾರೀ ಹಿನ್ನಡೆ ಕುರಿತು ಮಾತನಾಡಿದ ಡಿಎಂಕೆ ನಾಯಕ, “ಯಾರೋ ದೇವಮಾನವರು ನನ್ನ ತಲೆಗೆ 5-10 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದರು. ಸದ್ಯ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು, ನ್ಯಾಯದ ಮೇಲೆ ನನಗೆ ನಂಬಿಕೆಯಿದೆ. ನನ್ನ ಟೀಕೆಗಳಿಗೆ ಕ್ಷಮೆಯಾಚಿಸಲು ನನ್ನನ್ನು ಕೇಳಲಾಯಿತು. ಆದರೆ ನಾನು ಕ್ಷಮೆಯಾಚಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ನಾನು ಸ್ಟಾಲಿನ್ ಅವರ ಮಗ, ಕಲೈಂಜರ್ ಅವರ ಮೊಮ್ಮಗ ಮತ್ತು ನಾನು ಅವರ ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದೇನೆ ಎಂದು ಹೇಳಿದರು.

ಸೆಪ್ಟೆಂಬರ್‌ನಲ್ಲಿ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ನಿರ್ಮೂಲನೆಗೆ ಕರೆ ನೀಡಿದ್ದರು. ಅವರ ಹೇಳಿಕೆಯು ಬಿಜೆಪಿ, ಸಂಘಪರಿವಾರದಿಂದ ತೀವ್ರ ಟೀಕೆಗೆ ಗುರಿಯಾಯಿತು, ಮದ್ರಾಸ್ ಹೈಕೋರ್ಟ್ ಕೂಡ ಉದಯನಿಧಿ ಹೇಳಿಕೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.

BREAKING NEWS
Loading latest news...
Join our WhatsApp Channel Powered By : Online Pudu