ಉತ್ತರಾಖಂಡ: ಆದಿಕೈಲಾಸನ ದರ್ಶನ ಪೂರೈಸಿ ಹಿಂತಿರುಗುತ್ತಿದ್ದ ಆರು ಮಂದಿಯ ತಂಡವಿದ್ದ ಕಾರೊಂದು ಲಖನ್ಪುರ ಬಳಿಯ ಕಾಳಿ ನದಿಗೆ ಬಿದ್ದ ಪರಿಣಾಮ ಆರು ಜನರೂ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ ಮಂಗಳವಾರ ವರದಿಯಾಗಿದೆ.
ಮೃತಪಟ್ಟ 6 ಯಾತ್ರಿಕರ ಪೈಕಿ ಇಬ್ಬರು ಬೆಂಗಳೂರಿನವರು, ಇಬ್ಬರು ತೆಲಂಗಾಣದವರು ಹಾಗೂ ಮತ್ತಿಬ್ಬರು ಉತ್ತರಾಖಂಡದವರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಸ್ಪಂದಿಸಿದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, ಅಪಘಾತದಲ್ಲಿ ಮೃತಪಟ್ಟವರ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ಪಿಥೋರಗಢ್ ಪೊಲೀಸ್ ಅಧೀಕ್ಷಕ ಲೋಕೇಶ್ವರ್ ಸಿಂಗ್ ಮಾಹಿತಿ ನೀಡಿ, ಧಾರ್ಚುಲಾ-ಲಿಪುಲೇಖ್ ರಸ್ತೆಯಲ್ಲಿ ಸಂತ್ರಸ್ತರು ಆದಿ ಕೈಲಾಸನ ದರ್ಶನ ಮುಗಿಸಿ ಹಿಂತಿರುಗುತ್ತಿದ್ದಾಗ ಸಂಜೆ ವೇಳೆ ಈ ದುರ್ಘಟನೆ ಸಂಭವಿಸಿದೆ. ಘಟನೆ ಸಂಜೆ ವೇಳೆ ಸಂಭವಿಸಿದ ಕಾರಣ ತಕ್ಷಣ ಮೃತದೇಹಗಳನ್ನು ಹೊರತೆಗೆಯುವ ಕೆಲಸವನ್ನು ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಬುಧವಾರ ಬೆಳಗ್ಗೆಯಿಂದ ಶೋಧ ಕಾರ್ಯ ಆರಂಭವಾಗಲಿದೆ ಎಂದು ಎಸ್ಪಿ ಹೇಳಿದರು.