Mangalore- PUC ವಿದ್ಯಾರ್ಥಿನಿಯ ಸ್ನೇಹ ಮಾಡಿ ಲೈಂಗಿಕ ಕಿರುಕುಳ ನೀಡಿದ, ಚಿನ್ನಾಭರಣ ಲಪಟಾಯಿಸಿದ- ಆರೋಪಿಗೆ ಶಿಕ್ಷೆ ಪ್ರಕಟ


ಮಂಗಳೂರು: ಅಪ್ರಾಪ್ತ ವಯಸ್ಸಿನ ಪಿಯುಸಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ, ಆಕೆಯಿಂದ  ಚಿನ್ನಾಭರಣ ಲಪಟಾಯಿಸಿದ ಪ್ರಕರಣದಲ್ಲಿ ಆರೋಪಿಯ ಮೇಲಿನ ಆರೋಪ ಸಾಬೀತಾಗಿದ್ದು,  ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್‌ಟಿಎಸ್‌-1)ದಲ್ಲಿ ಸಾಬೀತಾಗಿದ್ದು, ಅಪರಾಧಿಗೆ  ಮೂರು ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಉಳ್ಳಾಲ ಪೊಲೀಸ್‌ ಠಾಣೆ ವ್ಯಾಪ್ತಿಯ ಜಪ್ಪಿನಮೊಗರು ಕಜೆಕಾರ್ ನಿವಾಸಿ ರೋಶನ್ ಡಿಸೋಜ ಆಲಿಯಾಸ್ ರೋಶನ್ ಫರ್ನಾಂಡಿಸ್ (31) ಶಿಕ್ಷೆಗೊಳಗಾದ ಅಪರಾಧಿ.

ರೋಶನ್ ಡಿಸೋಜ  2015ರ ನ.16ರಂದು ಬೆಳಗ್ಗೆ ನಗರದ ಕಾಲೇಜಿನ ಪಿಯು ವಿದ್ಯಾರ್ಥಿನಿ ಬಸ್‌ನಿಂದ ಇಳಿದು ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ತನ್ನ ಮಾತಿನ ಮೋಡಿಯಿಂದ ಆಕೆಯ ವಿಶ್ವಾಸ ಗಳಿಸಿದ್ದನು. ಅನಂತರ ವಿದ್ಯಾರ್ಥಿನಿಯನ್ನು ಮಂಗಳೂರಿನ ಹೋಟೆಲ್, ಮಾಲ್‌ಗಳಿಗೆ ಕರೆದುಕೊಂಡು ಹೋಗಿ ತಿರುಗಾಡಿದ್ದನು.

ವಿದ್ಯಾರ್ಥಿನಿಯ ವಿಶ್ವಾಸ ಗಳಿಸುತ್ತಿದ್ದಂತೆ "ಆರೋಪಿ ರೋಶನ್ ತನಗೆ ತುರ್ತಾಗಿ ಹಣದ ಆವಶ್ಯಕತೆ ಇದೆ ಎಂದು ಆಕೆಯನ್ನು ನಂಬಿಸಿದ್ದ. ಅದರಂತೆ 2015ರ ಡಿ.28 ರಂದು ಆಕೆಯ ಮನೆ ಬಳಿ ಹೋಗಿ ಒಟ್ಟು 86.07 ಗ್ರಾಂ ತೂಕದ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದನು. ಇದಾದ ಕೆಲವು ಸಮಯದ ನಂತರ ಆರೋಪಿ ರೋಶನ್ 'ಈ ಹಿಂದೆ ಅಡವಿಟ್ಟಿದ್ದ ಚಿನ್ನದ ವಾಯಿದೆ ಮುಗಿಯುತ್ತಿದೆ. ಬಡ್ಡಿ ಕಟ್ಟದಿದ್ದರೆ ಅದನ್ನು ಮಾರಾಟ ಮಾಡುತ್ತಾರೆ. ಅದಕ್ಕೆ ಮತ್ತೆ ಚಿನ್ನಾಭರಣ ಬೇಕಾಗಿದೆ' ಎಂದು ಬಾಲಕಿಯನ್ನು ನಂಬಿಸಿದ್ದನು. 2016ರ ಮಾ.12ರಂದು ಬಾಲಕಿಯ ಅಜ್ಜಿಯ ಮನೆಯ ಬಳಿಗೆ ತೆರಳಿ ಬಾಲಕಿಯ ಮೂಲಕ 34.01 ಗ್ರಾಂ ಮೌಲ್ಯದ ಚಿನ್ನಾಭರಣ ಗಳನ್ನು ಪಡೆದುಕೊಂಡಿದ್ದನು.

ಆರೋಪಿ 2016ರ ಮಾ.30 ರಂದು ಬೆಳಗ್ಗೆ 11.30ಕ್ಕೆ ಕದ್ರಿಪಾರ್ಕ್‌ಗೆ ವಿದ್ಯಾರ್ಥಿನಿಯನ್ನು ಕರೆ ದೊಯ್ದು  ಲೈಂಗಿಕ ದೌರ್ಜನ್ಯ ನಡೆಸಿದ್ದನು. ಅಂದು ಬಾಲಕಿ ಮನೆಗೆ ತಲುಪುವಾಗ ತಡ ವಾಗಿದ್ದು ಆ ಬಗ್ಗೆ ಮನೆಯವರು ಪ್ರಶ್ನಿಸಿದ್ದರು. ಆಗ ಬಾಲಕಿ ನಡೆದಿರುವ ವಿಚಾರಗಳನ್ನು ತಿಳಿಸಿದ್ದಾಳೆ. ಮನೆಯವರು ಆರೋಪಿ ಬಗ್ಗೆ ವಿಚಾರಿಸಿದ ಬಳಿಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಪೋಕ್ಸೋ ಕಾಯ್ದೆಯಡಿ ಆರೋಪಿಗೆ ಶಿಕ್ಷೆ

ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ POCSO ಕಾಯ್ದೆಯ ಕಲಂ 8 ರಂತೆ 3 ವರ್ಷ ಸಾದಾ ಸಜೆ, 5,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 3 ತಿಂಗಳು ಸಾದಾ ಸಜೆ, POCSO ಕಾಯ್ದೆಯ ಕಲಂ 12ರಂತೆ ಒಂದು ವರ್ಷ ಸಾದಾ ಸಜೆ, 2,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 1 ತಿಂಗಳ ಸಾದಾ ಸಜೆ, ಭಾರತೀಯ ದಂಡ ಸಂಹಿತೆಯ ಕಲಂ 420ರಂತೆ 3 ವರ್ಷ ಸಾದಾ ಸಜೆ, 5,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 1 ತಿಂಗಳು ಸಾದಾ ಸಜೆ ವಿಧಿಸಿ, ಸಂತ್ರಸ್ತ ಬಾಲಕಿಗೆ 50 ಸಾವಿರ ರೂ. ಪರಿಹಾರ ನೀಡುವಂತೆ ಸರಕಾರಕ್ಕೆ ಆದೇಶಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ಅವರು ವಾದಿಸಿದ್ದರು.