"ಲೋಕಸಭೆಗೆ ಪುತ್ತಿಲ ಅಭಿಯಾನ" ಎಫೆಕ್ಟ್‌: ನಳಿನ್‌ಗೆ ಬದಲು ಈ ಅಭ್ಯರ್ಥಿಗೆ ಟಿಕೆಟ್ ಸಾಧ್ಯತೆ

"ಲೋಕಸಭೆಗೆ ಪುತ್ತಿಲ ಅಭಿಯಾನ" ಎಫೆಕ್ಟ್‌: ನಳಿನ್‌ಗೆ ಬದಲು ಈ ಅಭ್ಯರ್ಥಿಗೆ ಟಿಕೆಟ್ ಸಾಧ್ಯತೆ





ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆ, ನಳಿನ್‌ ಕಟೀಲ್ ತವರಿನಲ್ಲೇ ಮುದುಡಿದ ಕಮಲ, ತ್ರಿಮೂರ್ತಿ ನಾಯಕರ ಬ್ಯಾನರ್‌ಗೆ ಚಪ್ಪಲಿ ಹಾರ... ಹೀಗೆ ಸಾಲು ಸಾಲು ಟ್ರೋಲ್, ಟೀಕೆ, ಹಿನ್ನಡೆ ಮಧ್ಯೆ ಲೋಕಸಭೆಗೆ ಪುತ್ತಿಲ ಅಭಿಯಾನ ಮತ್ತಷ್ಟು ಕಾವು ಪಡೆದುಕೊಂಡಿದೆ.


ಈ ಅಭಿಯಾನ ಬಿಜೆಪಿ ರಾಷ್ಟ್ರೀಯ ನಾಯಕರ ಗಮನ ಸೆಳೆದಿದೆ ಎಂಬುದೂ ಅಷ್ಟೇ ಸತ್ಯ. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿ ಮುಂದೆಯೇ ಆಳೆತ್ತರದ 'ಲೋಕಸಭೆಗೆ ಪುತ್ತಿಲ' ಬ್ಯಾನರ್ ಎದ್ದು ನಿಂತಿದ್ದು, ಅರೆ ಕ್ಷಣದ ಹೊತ್ತಲ್ಲೇ 150ಕ್ಕೂ ಅಧಿಕ ವಾಟ್ಸ್ಯಾಪ್ ಗ್ರೂಪ್ ಸೃಷ್ಟಿಯಾಗಿ ಕಾರ್ಯಕರ್ತರ ಪಡೆ ರಚನೆಯಾಗಿರುವುದು ಕೂಡ ಪುತ್ತಿಲ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟಿಸಿದೆ.



ಈ ಮಧ್ಯೆ, ಈ ಬಾರಿ ನಳಿನ್ ಕುಮಾರ್ ಕಟೀಲ್‌ ಅವರಿಗೆ ಟಿಕೆಟ್ ನಿರಾಕರಿಸುವ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆ ನಡೆದಿದೆ. ಮೂರು ಬಾರಿಯೂ ಅದೃಷ್ಟದಿಂದಲೇ ಗೆದ್ದಿರುವ ನಳಿನ್ ಅದೇ ಅದೃಷ್ಟ ಕುದುರೆಯ ಬೆನ್ನೇರಿ ರಾಜ್ಯಾಧ್ಯಕ್ಷ ಸ್ಥಾನವನ್ನೂ ಗಿಟ್ಟಿಸಿಕೊಂಡಿದ್ದಾರೆ.



ನಾಲ್ಕನೇ ಬಾರಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರೂ ಪುತ್ತೂರು ವಿಧಾನಸಭೆಯ ಫಲಿತಾಂಶ ಮಂಗಳೂರು ಲೋಕಸಭೆಯಲ್ಲೂ ಮರುಕಳಿಸಬಹುದು ಎಂಬ ಆತಂಕ ದೆಹಲಿ ನಾಯಕರಲ್ಲಿ ಮೂಡಿಸಿದೆ.



ಈ ಹಿನ್ನೆಲೆಯಲ್ಲಿ ಪ್ರಭಾವಿ ಯುವ ನಾಯಕರೊಬ್ಬರ ಹುಡುಕಾಟವನ್ನು ಆಂತರಿಕವಾಗಿ ನಡೆಸಲಾಗಿದೆ. ಆಗ ಧುತ್ತೆಂದು ಕಣ್ಣಿಗೆ ಬಿದ್ದವರು ಕ್ಯಾಪ್ಟನ್ ಬೃಜೇಶ್ ಚೌಟ.


ಮಂಗಳೂರು ಕಂಬಳದ ಮೂಲಕ ಜಿಲ್ಲೆಯಲ್ಲಿ ಮನೆ ಮಾತಾಗಿರುವ ಕ್ಯಾ. ಬೃಜೇಶ್ ಚೌಟ ಪಾದರಸದಂತಹ ವ್ಯಕ್ತಿತ್ವದ ರಾಷ್ಟ್ರೀಯವಾದಿ ನಾಯಕ. ಮೃಧು ಭಾಷಿ, ಸಂಘಟನಾ ಚತುರ. ಎಂಥವರನ್ನೂ ಸೆಳೆಯುವ ಯುವ ನಾಯಕತ್ವ ಅವರದ್ದು.


ಇಲ್ಲಿಯವರೆಗೆ ಯಾವುದೇ ಕಪ್ಪು ಚುಕ್ಕೆ ಇಲ್ಲದ ಬೃಜೇಶ್ ರಾಷ್ಟ್ರೀಯ ನಾಯಕರ ಗಮನ ಸೆಳೆದಿರುವುದು ಹೇಗೆ ಎನ್ನುವ ಕುತೂಹಲ ಇದ್ದದ್ದೇ... ಬಿಜೆಪಿಯ ರಾಜ್ಯಸಭಾ ಸದಸ್ಯ ಹಾಗೂ ಮಾಹಿತಿ ಹಾಗೂ ತಂತ್ರಜ್ಙಾನ ಸಚಿವ ರಾಜೀವ್ ಚಂದ್ರಶೇಖರ್ ಅವರ ಆತ್ಮೀಯ ಒಡನಾಟ ಹೊಂದಿರುವ ಬೃಜೇಶ್ ಚೌಟ, ನಿರಾಯಾಸವಾಗಿ ರಾಷ್ಟ್ರೀಯ ಮಟ್ಟದ ನಾಯಕರ ನೀಲಿ ಕಣ್ಣಿನ ಹುಡುಗನಾಗಿ ಕಂಗೊಳಿಸಿದ್ದಾರೆ.


ಇದುವರೆಗೆ ನಡೆದಿರುವ ಬೆಳವಣಿಗೆಗಳು ಮತ್ತು ಸಾಧ್ಯತೆಗಳನ್ನು ನೋಡಿದಾಗ, ಬೃಜೇಶ್ ಚೌಟ ಅವರನ್ನೇ ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನಾಗಿ ಹೆಸರಿಸುವ ಸಾಧ್ಯತೆ ಇದೆ.

.

BREAKING NEWS
Loading latest news...
Join our WhatsApp Channel Powered By : Online Pudu