ಸಂಚಾರದಲ್ಲಿದ್ದ ಕಾರಿನೊಳಗಡೆ ನಾಲ್ವರು ಕಾಮುಕರಿಂದ ಯುವತಿಯ ಮೇಲೆ ಅತ್ಯಾಚಾರ...!‌


ಬೆಂಗಳೂರು: ಸಂಚಾರದಲ್ಲಿದ್ದ ಕಾರಿನೊಳಗಡೆಯೇ ನಾಲ್ವರು ಕಾಮುಕರನ್ನು ಎಳೆದೊಯ್ದು ಅತ್ಯಾಚಾರ ಎಸಗಿರುವ ಅಮಾನುಷವಾಗಿ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ‌. ಇದೀಗ ಕೃತ್ಯ ಎಸಗಿರುವ ನಾಲ್ವರು ಆರೋಪಿಗಳನ್ನು ನಗರದ ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸತೀಶ್, ವಿಜಯ್, ಶ್ರೀಧರ್ ಹಾಗೂ ಕಿರಣ್ ಬಂಧಿತ ಕಾಮುಕರು.

ಮಾ.25ರ ರಾತ್ರಿ ಕೋರಮಂಗಲದ ನ್ಯಾಷನಲ್ ಗೇಮ್ಸ್ ಪಾರ್ಕ್ ನಲ್ಲಿ ಸಂತ್ರಸ್ತೆ ಹಾಗೂ ಆಕೆಯ ಸ್ನೇಹಿತ ಕುಳಿತುಕೊಂಡಿದ್ದರು. ಅಲ್ಲಿಗೆ ಬಂದ ನಾಲ್ವರು ಆರೋಪಿಗಳು ಸಂತ್ರಸ್ತೆಯ ಜೊತೆಗಿದ್ದ ಸ್ನೇಹಿತನನ್ನು ಬೆದರಿಸಿ ಕಳುಹಿಸಿದ್ದಾರೆ ಎನ್ನಲಾಗಿದೆ. ಬಳಿಕ ಯುವತಿಯನ್ನು ಕಾರಿನಲ್ಲಿ ಎಳೆದೊಯ್ದು ನಗರದ ದೊಮ್ಮಲೂರು, ಇಂದಿರಾನಗರ, ಆನೇಕಲ್, ನೈಸ್ ರಸ್ತೆ ಸೇರಿದಂತೆ ಹಲವೆಡೆ ಸುತ್ತಾಡಿಸಿದ್ದಾರೆ. ಬಳಿಕ ಚಲಿಸುತ್ತಿದ್ದ ಕಾರಿನಲ್ಲಿಯೇ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ರಾತ್ರಿಪೂರ್ತಿ ಸುತ್ತಾಡಿದ ಬಳಿಕ ಬೆಳಗಿನ ಜಾವ 4 ಗಂಟೆಗೆ ಯುವತಿಯ ಮನೆಯ ಬಳಿಯ ರಸ್ತೆಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮಾರ್ಚ್ 26 ರಂದು ದೂರು ನೀಡಿದ್ದರು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದ್ದು, ಆರೋಪಿಗಳ ಪೂರ್ವಾಪರ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu