ಮೂಡುಬಿದಿರೆ: ಶಿಕ್ಷಣವು ಕೇವಲ ಪುಸ್ತಕದ ಪಾಠಗಳಿಗೆ ಸೀಮಿತವಾಗಿರಬಾರದು. ಜ್ಞಾನ, ಮೌಲ್ಯ ಮತ್ತು ಕೌಶಲ್ಯಗಳ ಸಮನ್ವಯವೇ ನಿಜವಾದ ಶಿಕ್ಷಣವಾಗಿದ್ದು, ಮೌಲ್ಯವಿಲ್ಲದ ಶಿಕ್ಷಣ ಅಪೂರ್ಣವಾಗುತ್ತದೆ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಫೆಡರೇಶನ್(ಎನ್ಇಸಿಎಫ್)ನ ರಾಜ್ಯ ಕರ್ಯದರ್ಶಿ ಶಶಿಧರ್ ಶೆಟ್ಟಿ ಹೇಳಿದರು.
ಅವರು ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ಮಾನವಿಕ ವಿಭಾಗದ ವತಿಯಿಂದ ‘ಆರ್ಟ್ಸ್-ಎಕ್ಸ್ಯುಂಬರೆನ್ಸ್ 2026’ ಅಂಗವಾಗಿ ಆಯೋಜಿಸಲಾದ ‘ಕ್ಷಿತಿವನ್ಷ್’ ರಾಜ್ಯಮಟ್ಟದ ಅಂತರ್ ಕಾಲೇಜು ಫೆಸ್ಟ್ನ್ನು ಉದ್ಘಾಟಿಸಿ ಮಾತನಾಡಿದರು.ದೈನಂದಿನ ಜೀವನದಲ್ಲಿ ಕೃತಜ್ಞತೆಯ ಭಾವವನ್ನು ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ. ಸಮಾಜವು ಕನ್ನಡಿಯಂತಿದ್ದು, ನಾವು ಹೇಗೆ ವರ್ತಿಸುತ್ತೇವೋ ಅದೇ ರೀತಿಯಲ್ಲಿ ಸಮಾಜ ಪ್ರತಿಬಿಂಬಿಸುತ್ತದೆ. ಆದ್ದರಿಂದ ಸಮಾಜವನ್ನು ದೂಷಿಸುವುದಕ್ಕಿಂತ ನಮ್ಮ ನಡವಳಿಕೆಯನ್ನು ಸರಿಪಡಿಸಿಕೊಳ್ಳುವುದು ಅಗತ್ಯ.
ಭೂಮಿ ಕೇವಲ ಮಾನವರಿಗೆ ಮಾತ್ರವಲ್ಲ. ಎಲ್ಲಾ ಜೀವಿಗಳಿಗೆ ಸೇರಿದೆ. “ತನ್ನಂತೆ ಪರರನ್ನು ಬಗೆದೊಡೆ ಬಿನ್ನಾಣುವಕ್ಕೂ ಇಲ್ಲವಯ್ಯ” ಎಂಬ ಸರ್ವಜ್ಞನ ನುಡಿಯಂತೆ, ಇತರರನ್ನು ನಮ್ಮಂತೆಯೇ ಕಾಣುವ ಮೌಲ್ಯ ಬಹಳ ಮುಖ್ಯ. ಇಂತಹ ಮೌಲ್ಯಗಳು ಕೇವಲ ಮನುಷ್ಯರಲ್ಲಿ ಮಾತ್ರವಲ್ಲ, ಪ್ರಕೃತಿಯ ಪ್ರತಿಯೊಂದು ಜೀವಿಯಲ್ಲೂ ಕಂಡುಬರುತ್ತದೆ. ಅದನ್ನು ಅರಿತು ಪರಸ್ಪರ ಪ್ರೀತಿ ಹಂಚಿಕೊಂಡಾಗ ಮಾತ್ರ ಅವುಗಳಿಗೆ ನಿಜವಾದ ಅರ್ಥ ಸಿಗುತ್ತದೆ.
ಮನುಷ್ಯ ಅಸೂಯೆ ಮತ್ತು ಸ್ವಾರ್ಥಕ್ಕೆ ಒಳಗಾದಾಗ ತನ್ನ ಸ್ಥಿಮಿತವನ್ನು ಕಳೆದುಕೊಳ್ಳುತ್ತಾನೆ. ಇದು ಸಾಮಾನ್ಯವಾಗಿ ತನ್ನ ತಟ್ಟೆಯನ್ನು ಬಿಟ್ಟು ಇನ್ನೊಬ್ಬರ ತಟ್ಟೆಯನ್ನು ನೋಡುವುದರಿಂದ ಉಂಟಾಗುತ್ತದೆ. ಆದ್ದರಿಂದ ಮೊದಲು ತನ್ನ ಸಾಮರ್ಥ್ಯವನ್ನು ಅರಿತುಕೊಳ್ಳಬೇಕು. ಏಕಾಗ್ರತೆ ಇದ್ದರೆ ಸಾಮರ್ಥ್ಯವೂ ವೃದ್ಧಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಇಂಡೋನೇಷ್ಯಾದಲ್ಲಿ ನಡೆದ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತೆ ಸಾವಿತ್ರಿ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿ ನಾಲ್ಕನೇ ರ್ಯಾಂಕ್ ಪಡೆದ ನಂದಿನಿ ಶಣೈ ಅವರನ್ನು ಸನ್ಮಾನಿಸಲಾಯಿತು.
ಕರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ, ಪ್ರಾಂಶುಪಾಲ ಡಾ. ಕುರಿಯನ್, ಶೈಕ್ಷಣಿಕ ಕುಲಸಚಿವ ಡಾ ಟಿ.ಕೆ. ರವೀಂದ್ರನ್, ಮಾನವಿಕ ವಿಭಾಗದ ಡೀನ್ ಸಂಧ್ಯಾ ಕೆ.ಎಸ್., ಕರ್ಯಕ್ರಮ ಸಂಯೋಜಕ ಡಾ. ಈಶ್ವರ್ ಎಂ.ಜಿ., ವಿದ್ಯಾರ್ಥಿ ಸಂಯೋಜಕರಾದ ಲಕ್ಷಾö್ಯ ಮತ್ತು ನೀತುಶ್ರೀ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಶ್ರೀವಲ್ಲಿ ಹಾಗೂ ಸಮೀಕ್ಷಾ ರಾವ್ ಕಾರ್ಯಕ್ರಮ ನಿರೂಪಿಸಿದರು. ದಿಶಾ ವಂದಿಸಿದರು.
