ಕಾಸರಗೋಡು: ಅಂಜುಶ್ರೀ ಸಾವಿಗೆ ಹೊಟೇಲ್ ಆಹಾರ ಸೇವನೆ ಕಾರಣವಲ್ಲ ಇಲಿ ವಿಷ ಸೇವನೆಯಿಂದ ಮೃತ್ಯು‌- ರಾಸಾಯನಿಕ ತಪಾಸಣಾ ವರದಿ


ಕಾಸರಗೋಡು: ಮಂಜೇಶ್ವರ ಗೋವಿಂದ ಪೈ ಕಾಲೇಜು ವಿದ್ಯಾರ್ಥಿನಿ, ಪೆರುಂಬಳ ಬೇನೂರು ನಿವಾಸಿ ಅಂಜುಶ್ರೀ ಪಾರ್ವತಿಯ ಸಾವಿಗೆ ಇಲಿ ಪಾಷಾಣ ಸೇವನೆಯೇ ಕಾರಣ ಎಂದು ರಾಸಾಯನಿಕ ತಪಾಸಣಾ ವರದಿಯಿಂದ ತಿಳಿದು ಬಂದಿದೆ. ಅಂತಿಮ ಮರಣೋತ್ತರ ಪರೀಕ್ಷಾ ವರದಿಯಲ್ಲೂ ಇದನ್ನು ದೃಢೀಕರಣಗೊಂಡಿತ್ತು. 

ಜ.7ರಂದು ಅಂಜುಶ್ರೀ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಟ್ಟಿದ್ದಳು. ಕೋಝಿಕ್ಕೋಡ್ ನ ಫಾರೆನ್ಸಿಕ್ ಪ್ರಯೋಗಾಲಯದಲ್ಲಿ ನಡೆಸಿದ ತಪಾಸಣೆಯಿಂದ ಆಕೆಯ ಸಾವು ಇಲಿ ಪಾಷಾಣ ಸೇವನೆಯಿಂದ ಆಗಿದೆ ಎಂದು ಖಚಿತ ಪಡಿಸಿದೆ. ಈ ಕುರಿತ ವರದಿ ತನಿಖಾ ತಂಡಕ್ಕೆ ಲಭಿಸಿದೆ.

ಕಾಸರಗೋಡು ನಗರದ ಹೊರವಲಯದಲ್ಲಿರುವ ಹೋಟೆಲೊಂದರಿಂದ ಆನ್‌ಲೈನ್‌ನಲ್ಲಿ ಆಹಾರ ಸೇವನೆ ಮಾಡಿರುವುದು ಅಂಜು ಸಾವಿಗೆ ಕಾರಣ ಎಂದು ಆಕೆಯ ಕುಟುಂಬಸ್ಥರು ಮೇಲ್ಪರಂಬ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಹೋಟೆಲ್ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಂಡಿದ್ದರು. ಆದರೆ ಈ ಆಹಾರ ಸೇವನೆಯಿಂದ ಆಕೆ ಸಾವು ಸಂಭವಿಸಿಲ್ಲ. ಬದಲಾಗಿ ಇಲಿ ವಿಷ ಸೇವನೆಯಿಂದಲೇ ಆಕೆ ಮೃತಪಟ್ಟಿದ್ದಾಳೆ ಎಂದು ತನಿಖೆಯಿಂದ ದೃಢಪಟ್ಟಿತ್ತು.