ಮಕಾಡೆ ಮಲಗಿದ 'ಲೈಗರ್' ಸಿನಿಮಾ: ವಿಜಯ್ ದೇವರಕೊಂಡ, ಪುರಿ ಜಗನ್ನಾಥ್ ಸಿನಿಮಾದಿಂದ ಹೊರ ನಡೆದ ನಿರ್ಮಾಪಕರು

ಹೈದರಾಬಾದ್: ವಿಜಯ್ ದೇವರಕೊಂಡ ಅಭಿನಯದ ಬಹು ನಿರೀಕ್ಷಿತ 'ಲೈಗರ್' ಸಿನಿಮಾ ಆಗಸ್ಟ್ 25ರಂದು ರಿಲೀಸ್ ಆಗಿತ್ತು. ಆದರೆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಸಿನಿಮಾ ಗೆದ್ದೇ ಗೆಲ್ಲುತ್ತದೆಂಬ ಅತಿಯಾದ ಭರವಸೆಯಲ್ಲಿದ್ದ ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ತಂಡಕ್ಕೆ 'ಲೈಗರ್' ಸೋಲು ಶಾಕ್ ನೀಡಿದೆ. ಹೀಗಾಗಿ ಚಿತ್ರದ ನಾಯಕ ನಟ ವಿಜಯ್ ದೇವರಕೊಂಡ ಸಂಭಾವನೆಯಲ್ಲಿ ಆರು ಕೋಟಿ ರೂ. ಹಣವನ್ನು ನಿರ್ಮಾಪಕರಿಗೆ ವಾಪಸ್ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. 

ಆದರೆ ಸಿನಿಮಾ ಸೋಲಿನ ಶಾಕ್ ನ ಬೆನ್ನಲ್ಲೇ ವಿಜಯ್ ದೇವರಕೊಂಡ ನಾಯಕನಾಗಿರುವ ಮತ್ತೊಂದು ಚಿತ್ರ 'ಜನಗಣಮನ' ನಿರ್ಮಾಪಕರು ಮತ್ತೊಂದು ಶಾಕ್ ನೀಡಿದ್ದಾರೆ. ಮೂಲಗಳ ಪ್ರಕಾರ ಈ ಸಿನಿಮಾ ನಿರ್ಮಾಪಕರು ಚಿತ್ರತಂಡದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ. 'ಲೈಗರ್' ಬಳಿಕ ಪುರಿ ಜಗನ್ನಾಥ್ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್‌ನಲ್ಲಿ ಸೆಟ್ಟೇರಿರುವ ಮತ್ತೊಂದು ಸಿನಿಮಾ 'ಜನಗಣಮನ'. ಈಗಾಗಲೇ ಈ ಸಿನಿಮಾ ಪೋಸ್ಟರ್ ಬಿಡುಗಡೆಯಾಗಿದ್ದು , ಎರಡು ಹಂತದ ಚಿತ್ರೀಕರಣ ಸಹ ಪೂರ್ಣಗೊಂಡಿದೆ. ಈ  ಮಾರ್ಚ್‌ನಲ್ಲಿ ಮೈ ಹೋಮ್ ಗ್ರೂಪ್ಸ್ ಸಂಸ್ಥೆಯು ಸಹ ನಿರ್ವಪಕರಾಗಿ ಚಿತ್ರತಂಡವನ್ನು ಸೇರಿಕೊಂಡಿತ್ತು . 

ಇದೀಗ 'ಲೈಗರ್' ಮಕಾಡೆ ಮಲಗಿದ ಬಳಿಕ ವಿಜಯ್ ದೇವರಕೊಂಡ ಅವರು ತಾವು ಮತ್ತೊಂದು ಸಿನಿಮಾ ಮಾಡಿದ ಬಳಿಕ 'ಜನಗಣಮನ' ಸಿನಿಮಾ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ್ದಾರಂತೆ. 'ಲೈಗರ್' ಸೋಲು ಹಾಗೂ ನಾಯಕ ನಟ ನಟಿಸಲು ಹಿಂದೇಟು ಹಾಕಿರುವ ಕಾರಣಗಳಿಂದಾಗಿ ನಿರ್ವಪಕರು ಈಗ 'ಜನಗಣಮನ' ಚಿತ್ರದಿಂದ ಹೊರನಡೆದಿದ್ದಾರೆ ಎಂಬ ಸುದ್ದಿ ಸದ್ಯ ಟಾಲಿವುಡ್ ಅಂಗಳದಲ್ಲಿ ಓಡಾಡುತ್ತಿದೆ.
BREAKING NEWS
Loading latest news...
Join our WhatsApp Channel Powered By : Online Pudu