ಫಾಜಿಲ್ ಮರ್ಡರ್ ಆರೋಪಿಗಳಿಗೆ ರಾಜಾತಿಥ್ಯ ನೀಡಿಲ್ಲ: ಪೊಲೀಸ್ ಆಯುಕ್ತರ ಸ್ಪಷ್ಟನೆ
ಫಾಜಿಲ್ ಕೊಲೆ ಪ್ರಕರಣದ ಆರೋಪಿಗಳಿಗೆ ಸುರತ್ಕಲ್ ಠಾಣೆಯಲ್ಲಿ ವಿಶೇಷ ಆತಿಥ್ಯ ನೀಡಲಾಗಿಲ್ಲ. ಈ ಬಗ್ಗೆ ಸುರತ್ಕಲ್ ಠಾಣೆಗೆ ಭೇಟಿ ನೀಡಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇನೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.
ಮಂಗಳೂರಲ್ಲಿ ಮಾತನಾಡಿದ ಅವರು, ಈ ಬಗ್ಗೆ ಕೆಲವು ಪ್ರಮುಖರು ನೀಡಿರುವ ಹೇಳಿಕೆಗಳನ್ನು ಗಮನಿಸಿದ್ದೇನೆ. ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳನ್ನು ನಿಯಮ ಅನುಸಾರವೇ ವ್ಯವಹರಿಸಲಾಗಿದೆ. ಯಾವ ಆಧಾರದಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಗೊತ್ತಾಗಿಲ್ಲ ಎಂದರು.
ಕಳೆದ ಸೋಮವಾರ ಬೆಳಗ್ಗೆ ಮುಹಮ್ಮದ್ ಫಾಜಿಲ್ ಮನೆ ಬಳಿ ಹೋಗಿದ್ದೆ. ಈ ವೇಳೆ ಅಲ್ಲಿ ಮಾತನಾಡಲು ಗಂಡಸರು ಯಾರೂ ಇರಲಿಲ್ಲ. ಅವರ ಕುಟುಂಬದ ಬಹುತೇಕ ಸದಸ್ಯರಲ್ಲಿ ನನ್ನ ಹಾಗೂ ಹಿರಿಯ ಅಧಿಕಾರಿಗಳ ಮೊಬೈಲ್ ನಂಬರ್ ಗಳಿವೆ. ಇಂತಹ ಆಧಾರರಹಿತ ಹೇಳಿಕೆ ನೀಡುವ ಬದಲು ನೇರವಾಗಿ ನನ್ನ ಗಮನಕ್ಕೆ ತರಬಹುದು ಎಂದು ಅವರು ಹೇಳಿದರು.
ಮೊಹಮ್ಮದ್ ಫಾಜಿಲ್ ಕೊಲೆ ನಗರದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ತರುವ ಪ್ರಕರಣವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳನ್ನು ರಾಜಾರೋಷವಾಗಿ ತಿರುಗಾಡಲು ಬಿಡುವ ಪ್ರಮೇಯವೇ ಇಲ್ಲ ಎಂದರು.