ಕಾಂಗ್ರೆಸ್ ತೊರೆದ ಕಪಿಲ್ ಸಿಬಲ್: ಸಮಾಜವಾದಿ ಪಕ್ಷದ ಬೆಂಬಲದಿಂದ ರಾಜ್ಯಸಭೆಗೆ ಸ್ಪರ್ಧೆ

ಕಾಂಗ್ರೆಸ್ ತೊರೆದ ಕಪಿಲ್ ಸಿಬಲ್: ಸಮಾಜವಾದಿ ಪಕ್ಷದ ಬೆಂಬಲದಿಂದ ರಾಜ್ಯಸಭೆಗೆ ಸ್ಪರ್ಧೆ





ಕಾಂಗ್ರೆಸ್‌ ಮತ್ತೆ ಆಘಾತ ಅನುಭವಿಸಿದೆ. ಜಿ-23 ಗುಂಪಿನ ಪ್ರಮುಖ ನಾಯಕ ಕಪಿಲ್‌ ಸಿಬಲ್‌ ಕಾಂಗ್ರೆಸ್ ಗೆ ಗುಡ್‌ಬೈ ಹೇಳಿದ್ದು, ಸಮಾಜವಾದಿ ಪಕ್ಷದ ಬೆಂಬಲ ಪಡೆದು ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.



ಮಾಜಿ ಸಿಎಂ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಸಂಸದ ರಾಮ್ ಗೋಪಾಲ್ ಯಾದವ್ ಸಮ್ಮುಖದಲ್ಲಿ ಸಿಬಲ್ ನಾಮಪತ್ರ ಸಲ್ಲಿಸಿದರು. ಬಳಿಕ ಮಾತನಾಡಿ, ಮೇ 16ರಂದೇ ಕಾಂಗ್ರೆಸ್ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರಿದ್ದೇನೆ, ಈಗ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದರು.




ಜೂನ್ 10ರಂದು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ರಾಜ್ಯಸಭೆಯಲ್ಲಿ ಸಿಬಲ್ ಅಧಿಕಾರಾವಧಿ ಜುಲೈ 4ಕ್ಕೆ ಕೊನೆಗೊಳ್ಳಲಿದೆ.



ಎಸ್‌ಪಿ ಹಿರಿಯ ನಾಯಕರ ಜೊತೆ ಮುನಿಸಿಕೊಂಡಿರುವ, ಭಿನ್ನಮತೀಯ ನಾಯಕರೊಂದಿಗೆ ಗುರುತಿಸಿಕೊಂಡಿರುವ ಸಮಾಜವಾದಿ ನಾಯಕ ಆಜಂ ಖಾನ್‌ ಅವರ ಬಿಡುಗಡೆಗೆ ಸುಪ್ರೀಂ ಕೋರ್ಟಿನಲ್ಲಿ ಸಿಬಲ್ ವಾದ ಮಂಡಿಸಿದ್ದರು.



'ಕಪಿಲ್ ಸಿಬಲ್ ಹಿರಿಯ ನ್ಯಾಯವಾದಿಗಳು. ಸಂಸತ್ತಿನಲ್ಲಿ ತಮ್ಮ ಅಭಿಪ್ರಾಯಗಳನ್ನು ಚೆನ್ನಾಗಿ ಮಂಡಿಸುತ್ತಾರೆ. ಅವರು ಸಮಾಜವಾದಿ ಪಕ್ಷ ಹಾಗೂ ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ' ಎಂದು ಅಖಿಲೇಶ್ ಹಾರೈಸಿದರು.