-->

ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆಗೆ ಸಂಚು ರೂಪಿಸಿದ್ದ ಪತ್ನಿ - ಕೊಲೆಗೈದ ಪ್ರಿಯಕರ ಅಂದರ್

ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆಗೆ ಸಂಚು ರೂಪಿಸಿದ್ದ ಪತ್ನಿ - ಕೊಲೆಗೈದ ಪ್ರಿಯಕರ ಅಂದರ್

ತುಮಕೂರು: ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆಗೆ ಸಂಚು ರೂಪಿಸಿದ್ದ ಪತ್ನಿ ಹಾಗೂ ಕೊಲೆಗೈದಿರುವ ಪ್ರಿಯಕರನನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ. 

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕರೇಜವನಹಳ್ಳಿ ಗ್ರಾಮದ ನಿವಾಸಿ ರಾಜು (34) ಕೊಲೆಯಾದ ದುರ್ದೈವಿ. ರಾಕೇಶ್‌ (19) ಹಾಗೂ ಮೀನಾಕ್ಷಿ ( 25) ಕೊಲೆಗೈದಿರುವ ಆರೋಪಿಗಳು. 

ಕೊಲೆಯಾದ ರಾಜು ಕಳೆದ 8 ವರ್ಷಗಳ ಹಿಂದೆ ಮೀನಾಕ್ಷಿಯನ್ನು ವಿವಾಹವಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ರಾಜು ಬೆಂಗಳೂರಿನಲ್ಲಿ ಒಂದು ವರ್ಷದಿಂದ ಕೆಲಸ ಮಾಡಿಕೊಂಡಿದ್ದ. ಕಳೆದ ಎರಡು ತಿಂಗಳಿಂದ ಬೆಂಗಳೂರು ಬಿಟ್ಟು ಮತ್ತೆ ಊರು ಸೇರಿದ್ದ. ಈ ಸಂದರ್ಭ ಅದೇ ಊರಿನವನಾದ ರಾಕೇಶ್ ಎಂಬಾತನ ಪರಿಚಯ ಮೀನಾಕ್ಷಿಗೆ ಆಗಿದೆ. ಪರಿಚಯ ಅನೈತಿಕ ಸಂಬಂಧಕ್ಕೆ ತಿರುಗಿದೆ. ಪರಿಣಾಮ ಕಳೆದ ಒಂದು ವರ್ಷಗಳಿಂದ ಇಬ್ಬರ ನಡುವೆ ಲವ್ವಿ ಡವ್ವಿ ಮುಂದುವರಿದಿತ್ತು. 

ಇತ್ತ ಪತಿ ರಾಜು ಬೆಂಗಳೂರು ತೊರೆದು ಮನೆ ಸೇರಿದ್ದರಿಂದ ಇವರಿಬ್ಬರ ಅನೈತಿಕ ಸಂಬಂಧಕ್ಕೆ ತಡೆ ಆದಂತಾಗಿತ್ತು. ಅಲ್ಲದೆ ಮದ್ಯಸೇವನೆ ಮಾಡುತ್ತಿದ್ದ ರಾಜು ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದನಂತೆ. ಈ ಎಲ್ಲಾ ವಿಚಾರವನ್ನು ಮೀನಾಕ್ಷಿ, ತನ್ನ ಪ್ರಿಯಕರ ರಾಕೇಶ್ ನೊಂದಿಗೆ ಹೇಳಿಕೊಂಡಿದ್ದಳು. ಏನಾದರೂ ಮಾಡಿ ನನ್ನ ಪತಿಯನ್ನು ಮುಗಿಸಿಬಿಡು ಎಂದು ಪ್ರಿಯಕರನ ಬಳಿ ಕೇಳಿಕೊಂಡಿದ್ದಳಂತೆ. ಅದರಂತೆ ಇಬ್ಬರು ಸೇರಿ ರಾಜು ಕೊಲೆಗೆ ಸಂಚು​ ರೂಪಿಸಿ, ಮುಹೂರ್ತ ಇಟ್ಟಿದ್ದಾರೆ. 

ಕಳೆದ ಶುಕ್ರವಾರ ರಾತ್ರಿ ರಾಜು ಮನೆ ಬಳಿಯ ತೋಟದ ಬಳಿ ರಾಕೇಶ್ ಹಾಗೂ ರಾಜು ಇಬ್ಬರೂ ಸೇರಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಈ ವೇಳೆ ರಾಜುಗೆ‌ ಮಧ್ಯರಾತ್ರಿಯವರೆಗೆ ಕಂಠಪೂರ್ತಿ ಮದ್ಯ ಕುಡಿಸಿ, ಆತನ ತಲೆ ಮೇಲೆ ಕಲ್ಲು ಎತ್ತಿಹಾಕಿ‌ ರಾಕೇಶ್​ ಕೊಲೆ ಮಾಡಿದ್ದಾನೆ. ಇದಾದ ಬಳಿಕ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ರಾಜು ಬೈಕ್​ನಲ್ಲಿದ್ದ ಪೆಟ್ರೋಲ್ ತೆಗೆದು, ರಾಜುಗೆ ಸುರಿದು ಬೆಂಕಿ ಹಚ್ಚಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಈ ವೇಳೆ ಮನೆಯ ಹಿಂಭಾಗದ ತೋಟದಲ್ಲಿ ಬೆಂಕಿ ಉರಿಯುತ್ತಿರುವುದನ್ನು ನೋಡಿ ರಾಜು ತಂದೆ ಬಂದು ಬೆಂಕಿ ನಂದಿಸಿದ್ದಾರೆ. ಪೊಲೀಸ್ ದೂರು ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಅಗಮಿಸಿದ ಕಳ್ಳಂಬೆಳ್ಳ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. 

ಇತ್ತ ಪತಿಯನ್ನು ಕೊಲೆ ಮಾಡಿಸಿ ಮೀನಾಕ್ಷಿ ತನಗೇನು ಗೊತ್ತಿಲ್ಲ ಎಂಬಂತೆ ಕಣ್ಣೀರಿಡುತ್ತಾ ಡ್ರಾಮ ಮಾಡುತ್ತಿದ್ದಳು. ಪೊಲೀಸ್ ತನಿಖೆಯಲ್ಲಿ ಮೀನಾಕ್ಷಿಯ ಕಳ್ಳಾಟ ಬಯಲಾಗಿದೆ. ರಾಜು ಕೊಲೆಯಾದ ಬಳಿಕ ತಮಗೇನು ಗೊತ್ತಿಲ್ಲದಂತೆ ರಾಕೇಶ್ ಹಾಗೂ ಮೀನಾಕ್ಷಿ ಡ್ರಾಮಾ ಮಾಡಿದ್ದಾರೆ. ರಾಜು ಅಂತ್ಯಕ್ರಿಯೆ ಆಗೋವರೆಗೂ ರಾಕೇಶ್, ರಾಜು ಮನೆಯಲ್ಲೇ ಓಡಾಡಿಕೊಂಡಿದ್ದ. ಪತಿಯ ಕೊಲೆ ಸಂಬಂಧ ಪೊಲೀಸರಿಗೆ ದೂರು ಕೊಡುವುದು ಬೇಡ. ಸತ್ತ ನನ್ನ ಪತಿ ವಾಪಸ್ ಬರೋದಿಲ್ಲ. ನನ್ನ ಪತಿಯೇ ಮದ್ಯಸೇವನೆ ಮಾಡಿ ಬೆಂಕಿ ಹಚ್ಚಿಕೊಂಡಿದ್ದಾನೆ ಎಂದು ಕತೆ ಕಟ್ಟಿದ್ದಾಳೆ. ಈ ವೇಳೆ ಪೊಲೀಸರು ರಾಜು ತಂದೆ ಕಡೆಯಿಂದ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಪೊಲೀಸ್ ತನಿಖೆಯಲ್ಲಿ ಪತ್ನಿಯ ಕಳ್ಳಾಟ ಬಯಲಾಗಿದೆ. ಆರೋಪಿ ರಾಕೇಶ್ ಹಾಗೂ ಮೀನಾಕ್ಷಿಯನ್ನು ಕಳ್ಳಂಬೆಳ್ಳ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ. 

Ads on article

Advertise in articles 1

advertising articles 2

Advertise under the article