
ಭೀಕರ ರಸ್ತೆ ಅಪಘಾತಕ್ಕೆ ತಾಯಿ-ಮಗಳು ಬಲಿ: ಪತಿಯ ಸ್ಥಿತಿ ಚಿಂತಾಜನಕ
Monday, March 14, 2022
ಬೆಳಗಾವಿ: ಲಾರಿ-ಕಾರು ನಡುವೆ ಸಂಭವಿಸಿರುವ ಭೀಕರ ರಸ್ತೆ ಅಪಘಾತದಲ್ಲಿ ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡಿದ್ದು, ಅವರ ಪತ್ನಿ ಹಾಗೂ ಪುತ್ರಿ ಸ್ಥಳದಲ್ಲೇ ಮೃತಪಟ್ಟಿ ಬೆಳಗಾವಿ ಜಿಲ್ಲೆ ಹುಕ್ಕಾರಿ ತಾಲೂಕಿನ ನರಸಿಂಗಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ವೈದ್ಯೆ ಡಾ.ಶ್ವೇತಾ ಎಸ್. ಮುರಗೋಡ (40) ಅವರ ಪುತ್ರಿ ಶಿಯಾ ಮುರಗೋಡ (7) ಮೃತಪಟ್ಟವರು. ಕಾರು ಚಲಾಯಿಸುತ್ತಿದ್ದ ವೈದ್ಯ ಡಾ.ಸಚಿನ್ ಮುರಗೋಡ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿತ್ತಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಬೆಳಗಾವಿ ನಗರದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಕೇಶ್ವರ ಪಟ್ಟಣಕ್ಕೆ ಡಾ.ಸಚಿನ್ ಕಾರು ಚಲಾಯಿಸುತ್ತಿದ್ದರು. ಈ ಸಂದರ್ಭ ನರಸಿಂಗಪುರ ಗ್ರಾಮದ ಬಳಿಯ ಹೆದ್ದಾರಿ ಪಕ್ಕದಲ್ಲಿ ನಿಂತಿದ್ದ ಕ್ಯಾಂಟರ್ಗೆ ಇವರ ಇನೋವಾ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.