-->

ಮಂಗಳೂರು: ಸೋಮೇಶ್ವರ ಸಮುದ್ರಕ್ಕೆ ಹಾರಿದ ಪ್ರಿಯತಮೆಯನ್ನು ರಕ್ಷಿಸಲು ಹೋಗಿ ಪ್ರಿಯಕರ ಸಮುದ್ರಪಾಲು

ಮಂಗಳೂರು: ಸೋಮೇಶ್ವರ ಸಮುದ್ರಕ್ಕೆ ಹಾರಿದ ಪ್ರಿಯತಮೆಯನ್ನು ರಕ್ಷಿಸಲು ಹೋಗಿ ಪ್ರಿಯಕರ ಸಮುದ್ರಪಾಲು

ಉಳ್ಳಾಲ: ತ್ರಿಕೋನ ಪ್ರೇಮ ಪ್ರಕರಣವೊಂದರಲ್ಲಿ ಸಿಲುಕಿರುವ ಪ್ರಿಯಕರನು ತನ್ನಿಬ್ಬರು ಪ್ರೇಯಸಿಯರನ್ನು ನಗರದ ಸೋಮೇಶ್ವರ ಬೀಚ್ ನಲ್ಲಿ ಮಾತುಕತೆಗೆಂದು ಬರಹೇಳಿದ್ದು, ಈ ಸಂದರ್ಭ ಏಕಾಏಕಿ ಸಮುದ್ರಕ್ಕೆ ಹಾರಿದ ಪ್ರೇಯಸಿಯೋರ್ವಳನ್ನು ಬದುಕಿಸಲು ಹೋಗಿ ಪ್ರಿಯಕರನೇ ದಾರುಣ ಅಂತ್ಯಗೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ.  

ನಗರದ ಹೊರವಲಯದ ಮುನ್ನೂರು ಗ್ರಾಮ, ಸೋಮನಾಥ ಉಳಿಯ ನಿವಾಸಿ ಲಾಯ್ಡ್ ಡಿಸೋಜ (28) ಮೃತ ಪ್ರಿಯಕರ. 

ಕಳೆದ 8 ವರ್ಷಗಳಿಂದ ಲಾಯ್ಡ್ ಡಿಸೋಜ, ಕೋಟೆಕಾರು ಪಾನೀರು ನಿವಾಸಿ ಅಶ್ವಿತಾ ಫೆರಾವೊ(22) ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಈ ನಡುವೆ ಲಾಯ್ಡ್  ಡಿಸೋಜನಿಗೆ ತೊಕ್ಕೊಟ್ಟು ಚೆಂಬುಗುಡ್ಡೆಯ ಇನ್ನೊಬ್ಬ ಕ್ರೈಸ್ತ ಯುವತಿಯೊಂದಿಗೆ ಪ್ರೇಮಾಂಕುರವಾಗಿದೆ. ಈ ವಿಚಾರ ತಿಳಿದು ಮೊದಲ ಪ್ರೇಯಸಿ ಅಶ್ವಿತಾ ಫೆರಾವೊ ತಗಾದೆ ತೆಗೆದಿದ್ದಾಳೆ.

ಈ ಹಿನ್ನೆಲೆಯಲ್ಲಿ ಮಾತುಕತೆ ನಡೆಸಿ ಬಗೆಹರಿಸಲೆಂದು ನಿನ್ನೆ ಸಂಜೆ ಲಾಯ್ಡ್ ಡಿಸೋಜ ತನ್ನಿಬ್ಬರು ಪ್ರೇಯಸಿಯರನ್ನು ಸೋಮೇಶ್ವರ ಕಡಲ ಕಿನಾರೆಗೆ ಕರೆಸಿದ್ದಾನೆ. ಈ ವೇಳೆ, ಲಾಯ್ಡ್ ಡಿಸೋಜ ಮಾತಿನಿಂದ ಬೇಸರಗೊಂಡ ಅಶ್ವಿತಾ ಫೆರಾವೊ ಏಕಾಏಕಿ‌ ರುದ್ರಪಾದೆಯಿಂದ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಲು ಯತ್ನಿಸಿದ್ದಾಳೆ. ಪ್ರೇಯಸಿಯನ್ನು ರಕ್ಷಿಸಲೆಂದು ಲಾಯ್ಡ್ ಕೂಡಾ ಸಮುದ್ರಕ್ಕೆ ಹಾರಿದ್ದಾನೆ. 

ಈ ವೇಳೆ, ಕಾವಲು ಪಡೆಯ ಸಿಬ್ಬಂದಿ ನೋಡಿ ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಪರಿಣಾಮ ಅಶ್ವಿತಾರನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.‌ ಆದರೆ ಪ್ರಿಯತಮೆಯನ್ನು ರಕ್ಷಿಸಲು ಹೋಗಿದ್ದ ಲಾಯ್ಡ್ ಸಮುದ್ರಪಾಲಾಗಿ ಅಸುನೀಗಿದ್ದಾನೆ. ಆತ್ಮಹತ್ಯೆಗೆ ಯತ್ನಿಸಿದ್ದ ಅಶ್ವಿತಾರನ್ನು ಚಿಕಿತ್ಸೆಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article