ಕೋಟ: ಸೆಗಣಿ ನೀರು ಹೋಗುವ ಗೊಬ್ಬರದ ಗುಂಡಿಗೆ ಬಿದ್ದು ಎರಡುವರೆ ವರ್ಷದ ಮಗು ಮೃತ್ಯು

ಕೋಟ : ದನದ ಹಟ್ಟಿಯ ಸೆಗಣಿ ನೀರು ಹೋಗುವ ಗೊಬ್ಬರದ ಗುಂಡಿಗೆ ಬಿದ್ದು ಎರಡುವರೆ ವರ್ಷದ ಮಗು ಮೃತಪಟ್ಟ ಹೃದಯವಿದ್ರಾವಕ ಘಟನೆ ಕುಂದಾಪುರದ ಮೊಳಹಳ್ಳಿಯ ಕೈಲೇರಿ ಎಂಬಲ್ಲಿ ನಡೆದಿದೆ. 

ಬಿಹಾರ ಮೂಲದ ಪ್ರಸ್ತುತ ಕೈಲೇರಿ ನಿವಾಸಿ ಲಾಲ್ ಬಿಹಾರಿ ಎಂಬವರ  ಎರಡುವರೆ ವರ್ಷದ ಪುತ್ರ ಅನುರಾಜ್ ಮೃತಪಟ್ಟ ಮಗು. 

ಬಿಹಾರ ರಾಜ್ಯದ ಕೆಸವರ್ ಪುರ್ ಆರಾ ಜಿಲ್ಲೆಯ ಮೂಲದವರಾದ ಲಾಲ್ ಬಿಹಾರಿಯವರು ಕೆಲವು ವರ್ಷಗಳಿಂದ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕೈಲೇರಿ ಮಾವಿನಕಟ್ಟೆಯಲ್ಲಿ ವಾಸವಾಗಿದ್ದರು. ಇವರು ಹೈನುಗಾರಿಕೆಯನ್ನು ವೃತ್ತಿಯಾಗಿ ಮಾಡಿಕೊಂಡಿದ್ದು,  ಹಟ್ಟಿಯಲ್ಲಿ ಸುಮಾರು 30 ದನಗಳಿತ್ತು. ಯಾವಾಗಲೂ ಹಟ್ಟಿಯನ್ನು ಲಾಲ್ ಬಿಹಾರಿಯವರೇ ಸ್ವಚ್ಛಗೊಳಿಸುತ್ತಿದ್ದರು. ಹಟ್ಟಿಯ ನೀರು ಅಲ್ಲಿಯೇ ಹಿಂದೆ ಇರುವ ಹೊಂಡದಲ್ಲಿ ತುಂಬುತ್ತಿತ್ತು . ಬಳಿಕ ಆ ನೀರನ್ನು ಖಾಲಿ ಮಾಡಲಾಗುತ್ತಿತ್ತು . ಆದರೆ ನಿನ್ನೆ ಕರೆಂಟ್ ಇಲ್ಲದಿದ್ದರಿಂದ ನೀರು ಖಾಲಿ ಮಾಡಲು ಸಾಧ್ಯವಾಗಿರಲಿಲ್ಲ . 

ಸಂಜೆ 5 ಗಂಟೆಗೆ ಸುಮಾರಿಗೆ ಮಗು ಅನುರಾಜ್ ನ ಪಾದರಕ್ಷೆ ಹಟ್ಟಿಯ ನೀರು ಹೋಗುವ ಹೊಂಡದ ಬಳಿ ಇರುವುದು ಗಮನಕ್ಕೆ ಬಂದಿದೆ. ಸಂಶಯಗೊಂಡ ಅವರು ಸಗಣಿ ನೀರಿನ ಹೊಂಡಕ್ಕೆ ಇಳಿದು ನೋಡಿದಾಗ ಮಗು ಪತ್ತೆಯಾಗಿದೆ. ಮಾತನಾಡದೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು ಮಗುವನ್ನು ತಕ್ಷಣ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಗುವನ್ನು ತಪಾಸಣೆ ಮಾಡಿದ ವೈದ್ಯರು ಮೃತಪಟ್ಟಿರುವುದಾಗಿ ಹೇಳಿದ್ದಾರೆ. 

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu