ಬಳ್ಳಾರಿ: ಖ್ಯಾತನಾಮರು, ರಾಜಕೀಯ ವ್ಯಕ್ತಿಗಳು, ಸಿನಿಮಾ ಸ್ಟಾರ್ ಗಳು ಮೃತಪಟ್ಟರೆ, ಅವರ ಅಂತಿಮ ದರ್ಶನಕ್ಕೆ ಸಾವಿರಾರು ಜನರು ಜಮಾಯಿಸುವುದನ್ನು ನಾವು ನೋಡಿರುತ್ತೇವೆ. ಆದರೆ ಬುದ್ಧಿಮಾಂದ್ಯ, ಹುಚ್ಚನೋರ್ವ ಮೃತಪಟ್ಟ ಸಂದರ್ಭ ಸಾವಿರಾರು ಜನರು ಸೇರಿ ಅಂತ್ಯಸಂಸ್ಕಾರ ನೆರವೇರಿಸಿರುವ ವಿಶಿಷ್ಟ ಘಟನೆಯೊಂದಕ್ಕೆ ಬಳ್ಳಾರಿ ಜಿಲ್ಲೆಯ ಹಡಗಲಿ ಪಟ್ಟಣ ಸಾಕ್ಷಿಯಾಗಿದೆ.
ಹಡಗಲಿ ಪಟ್ಟಣದಲ್ಲಿ ಬೀದಿ ಬೀದಿ ಅಲೆಯುತ್ತಿದ್ದ ಮಾನಸಿಕ ಅಸ್ವಸ್ಥ ಬಸವ ಅಲಿಯಾಸ್ ಹುಚ್ಚ ಬಸ್ಯಾ(45) ಮೃತಪಟ್ಟಿದ್ದಾನೆ. ಅವನ ಅಂತ್ಯಕ್ರಿಯೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದಲ್ಲದೇ ಊರು ತುಂಬಾ ಅವನ ಫೋಟೋವುಳ್ಳ ಫ್ಲೆಕ್ಸ್, ಬ್ಯಾನರ್ ಹಾಕಿಸಿ ಅದ್ದೂರಿಯಾಗಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಹುಚ್ಚ ಬಸ್ಯಾ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದನು. ಊರಿನ ಜನರು ಆತನ ಅಂತ್ಯಕ್ರಿಯೆಗೆ ಮಂಗಳವಾದ್ಯಗಳನ್ನು ನುಡಿಸುತ್ತಾ, ಜೈಕಾರ ಹಾಕುತ್ತಾ ಮೆರವಣಿಗೆ ಮಾಡಿದ ವೀಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಮಾನಸಿಕ ಅಸ್ವಸ್ಥನಾಗಿದ್ದರೂ ಯಾರಿಗೂ ತೊಂದರೆ ನೀಡದ ಹುಚ್ಚ ಬಸ್ಯಾ ಕೇವಲ 1 ರೂ. ಮಾತ್ರ ಭಿಕ್ಷೆ ಪಡೆಯುತ್ತಿದ್ದ. ಜನರು ಎಷ್ಟೇ ಹಣ ಕೊಟ್ಟರೂ ಅದನ್ನು ಮರಳಿಸುತ್ತಿದ್ದ. ಅಲ್ಲದೆ, ಬಸ್ಯಾನಿಗೆ ಭಿಕ್ಷೆ ನೀಡಿದರೆ ತಮಗೆ ಅದೃಷ್ಟ ಖುಲಾಯಿಸುತ್ತದೆ ಎಂಬ ನಂಬಿಕೆ ಅಲ್ಲಿನ ಜನರಲ್ಲಿತ್ತು. ಇದರಿಂದ ಬಸ್ಯಾ ಪಟ್ಟಣದ ಅದೃಷ್ಟ ಎಂದೇ ಊರ ಮಂದಿ ಭಾವಿಸಿದ್ದರು.
ಜಿಲ್ಲೆಯ ರಾಜಕಾರಣಿಗಳ ಹೆಸರನ್ನು ನೆನಪಿಟ್ಟುಕೊಂಡು ಸ್ಪಷ್ಟವಾಗಿ ಹೇಳುತ್ತಿದ್ದ ಬಸ್ಯಾ, ಜನರ ಪ್ರೀತಿಗೆ ಪಾತ್ರನಾಗಿದ್ದ ಎಂಬುದಕ್ಕೆ ಅವನ ಅಂತಿಮಯಾತ್ರೆಯಲ್ಲಿ ಭಾಗವಹಿಸಿದ್ದ ಸಾವಿರಾರು ಜನರೇ ಸಾಕ್ಷಿ.