Kinnigoli: ಮಕ್ಕಳನ್ನು ಕಣಜದ ಹುಳುವಿನ ದಾಳಿಯಿಂದ ರಕ್ಷಿಸಿ ಗೃಹರಕ್ಷಕ ದಳದ ಸಿಬ್ಬಂದಿ ಸಾವು!

ಮಂಗಳೂರು: ಕಣಜ ಹುಳು ದಾಳಿಯಿಂದ ಮಕ್ಕಳನ್ನು ರಕ್ಷಿಸಲು ಹೋಗಿ ಗೃಹರಕ್ಷಕ ದಳದ ಸಿಬ್ಬಂದಿಯೋರ್ವರು ಹುಳುಗಳ ದಾಳಿಗೊಳಪಟ್ಟು ಮೃತಪಟ್ಟ ಘಟನೆ ಕಿನ್ನಿಗೋಳಿ ಸಮೀಪ ನಡೆದಿದೆ.

ಎಕ್ಕಾರು ದೇವರಗುಡ್ಡೆ ನಿವಾಸಿ ಸಂತೋಷ್ (35) ಮೃತಪಟ್ಟವರು.

ಬುಧವಾರ ಸಂಜೆ ಕಿನ್ನಿಗೋಳಿ ಬಳಿಯಲ್ಲಿರುವ ಶ್ರೀರಾಮ ಮಂದಿರ ಬಳಿ ಸಂತೋಷ್ ರಿಕ್ಷಾದಲ್ಲಿ ಹೋಗುತ್ತಿದ್ದರು.‌ ಈ ಸಂದರ್ಭ ಕಿನ್ನಿಗೋಳಿ ಪರಿಸರದ ಶಾಲೆಯ ಕೆಲ ಮಕ್ಕಳ ಮೇಲೆ ಕಣಜದ ಹುಳಗಳು ದಾಳಿ ಮಾಡಿದ್ದನ್ನು ಅವರು ಗಮನಿಸಿದ್ದಾರೆ. ತಕ್ಷಣ ಸಂತೋಷ್ ಅವರು ಕಣಜದ ಹುಳುಗಳಿಂದ ಮಕ್ಕಳನ್ನು ರಕ್ಷಿಸಿ ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆದರೆ ಮಕ್ಕಳನ್ನು ರಕ್ಷಣೆ ಮಾಡುವ ವೇಳೆ ಕಣಜದ ಹುಳು ಸಂತೋಷ್ ಅವರನ್ನೂ ದಾಳಿ ಮಾಡಿ ಕಡಿದಿತ್ತು. ಆದರೆ, ಅದಕ್ಕೆ ಅವರು ಚಿಕಿತ್ಸೆ ಪಡೆಯದೇ ಮನೆಗೆ ತೆರಳಿದ್ದಾರೆ. ಪರಿಣಾಮ ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಮನೆಯಲ್ಲಿ ಕುಳಿತಿದ್ದಂತೆ ಅವರು ಮೃತಪಟ್ಟಿದ್ದಾರೆ. ಆರು ಮಕ್ಕಳನ್ನು ಕಣಜದ ಹುಳುಗಳಿಂದ ರಕ್ಷಣೆ ಮಾಡಿ ಮೃತಪಟ್ಟ ಸಂತೋಷ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.