ಬೆಳ್ತಂಗಡಿ: ಮನೆಮಂದಿ ಹೊರ ಹೋಗುವುದನ್ನೇ ಕಾದು ಹೊಂಚು ಹಾಕಿ ದರೋಡೆ: 12 ಲಕ್ಷ ರೂ. ಚಿನ್ನ, 5,200 ರೂ‌. ಎಗರಿಸಿದ ಖದೀಮರು

ಬೆಳ್ತಂಗಡಿ: ಹಾಡಹಗಲೇ ಮನೆಯೊಂದಕ್ಕೆ ನುಗ್ಗಿದ ಕಳ್ಳರು 12 ಲಕ್ಷ ರೂ. ಮೌಲ್ಯದ 40 ಪವನ್ ಚಿನ್ನಾಭರಣ ಹಾಗೂ ನಗದು ದರೋಡೆಗೈದ ಘಟನೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದಲ್ಲಿ ಅ.31ರಂದು ನಡೆದಿದೆ. 

ಇಂದಬೆಟ್ಟು ಗ್ರಾಮದ ಬಂಗಾಡಿ ದೇರಾಜೆ ಮನೆ ನಿವಾಸಿ ಕೃಷಿಕ ಹಾಗೂ ಅಡಿಕೆ ವ್ಯಾಪಾರಿ ಮಹಮ್ಮದ್ ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ.

ಮಹಮ್ಮದ್‌ರವರ ಪತ್ನಿ ಇಬ್ಬರು ಮಕ್ಕಳೊಂದಿಗೆ ಸಂಬಂಧಿಕರ ಮದುವೆ ನಿಶ್ಚಿತಾರ್ಥಕ್ಕೆಂದು ತೆರಳಿದ್ದರು. ಮಹಮ್ಮದ್ ರವರು ಸಂಜೆ ವೇಳೆ ಅಡಿಕೆ ತೋಟದಲ್ಲಿ ಹುಲ್ಲು ತೆಗೆಯಲು ಹೋಗಿದ್ದ ವೇಳೆ ಮನೆಯ ಮಂದಿ ಸಮಾರಂಭವೊಂದರ ನಿಮಿತ್ತ ಹೊರಗಡೆ ಹೋಗಿದ್ದರು. ಮನೆಯಲ್ಲಿದ್ದ ಮಹಮ್ಮದ್ ಅವರು ತೋಟಕ್ಕೆ ಹೋಗಿದ್ದ ಸಂದರ್ಭ ಹೊಂಚು ಹಾಕಿ ಕಳ್ಳರು ಕೃತ್ಯ ಎಸಗಿದ್ದಾಗಿ ಶಂಕೆ ವ್ಯಕ್ತವಾಗಿದೆ. ನಿಶ್ಚಿತಾರ್ಥಕ್ಕೆ ಹೋಗಿದ್ದ ಮಹಮ್ಮದ್ ಪತ್ನಿ ಮರಳಿ ಬಂದ ಮೇಲೆ ಈ ಕೃತ್ಯ ಬೆಳಕಿಗೆ ಬಂದಿದೆ.

ಕೋಣೆಯಲ್ಲಿದ್ದ ಗೋದ್ರೇಜ್‌ ಬಾಗಿಲು ಸ್ವಲ್ಪ ತೆರೆದಿರುವುದು ಕಂಡು ಮಹಮ್ಮದ್ ಅವರ ಪತ್ನಿಗೆ ಸಂಶಯ ಬಂದಿದೆ. ಅವರು ಪರಿಶೀಲನೆ ನಡೆಸಿದಾಗ ಲಾಕರ್‌ನಲ್ಲಿದ್ದ ವ್ಯಾನಿಟಿ ಬ್ಯಾಗ್‌ವೊಂದರಲ್ಲಿದ್ದ ನಗದು ಸಹಿತ ಚಿನ್ನಾಭರಣ ಕಳವು ಆಗಿರುವುದು ತಿಳಿದು ಬಂದಿದೆ. 

ಗಾದ್ರೆಜ್ ನಲ್ಲಿದ್ದ 5,200 ರೂ ನಗದು ಮತ್ತು 13 ಪವನ್‌ನ ಒಂದು ಕಾಯಿನ್ ನೆಕ್ಲೆಸ್, 1 ಪವನಿನ ಚೈನ್,1 ಪವನಿನ ಗುಂಡು ಇರುವ ಸಣ್ಣ ಚೈನ್, 1.50 ಪವನಿನ ಎರಡು ಮಕ್ಕಳ ಚೈನ್, 4 ಪವನಿನ ಕಾಯಿನ್ಸ್, 16 ಪವನಿನ 4 ಚಿನ್ನದ ಬಿಸ್ಕೆಟ್, ಸುಮಾರು ಒಂದೂವರೆ ಇಂಚು ಉದ್ದದ 2 ಪವನಿನ ಚಿನ್ನದ ಗಟ್ಟಿ, ವಾಚ್ ಆಕಾರದ ಚಿತ್ರವಿರುವ ಅರ್ಧ ಪವನಿನ ಬ್ರಾಸ್ ಲೈಟ್, ಅರ್ಧ ಪವನಿನ ತುಂಡಾದ ಬಳೆ ಮತ್ತು ಪೆಂಡೆಂಟ್, ಅರ್ಧ ಪವನಿನ ಮಗುವಿನ ಕಿವಿ ಓಲೆ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ ಸುಮಾರು 12,05,200 ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ  ಮಹಮ್ಮದ್ ರವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.


BREAKING NEWS
Loading latest news...
Join our WhatsApp Channel Powered By : Online Pudu