ಮಂಗಳೂರು: ಮಾಂಸದ ಆಮಿಷವೊಡ್ಡಿ ಕರೆದೊಯ್ದು ಐದರ ಬಾಲೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಧರ್ಮದೇಟು

ಮಂಗಳೂರು: ಮಾಂಸ ತಿನ್ನಿಸುವ ಆಮಿಷವೊಡ್ಡಿ ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿರುವ ಕಾಮುಕನಿಗೆ ಸ್ಥಳೀಯರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಕಿನ್ಯ ಗ್ರಾಮದ ನಡುಕುಮೇರಿನಲ್ಲಿ ನಡೆದಿದೆ. 

ಮೂಲತಃ ಬೆಂಗಳೂರು ಕಲಾಸಿಪಾಳ್ಯ ನಿವಾಸಿ ಸದ್ಯ ಕಲ್ಕಟ್ಟದಲ್ಲಿ ವಾಸಿಸುವ ಆರೀಫ್ ಪಾಷಾ(30) ಬಂಧಿತ ಆರೋಪಿ.

ಕೂಲಿ ಕಾರ್ಮಿಕನಾಗಿದ್ದ ಈತ, ಬಾಲಕಿಯ ತಂದೆಗೆ ಪರಿಚಿತನಾಗಿದ್ದ. ಆರೋಪಿ‌ ಆರೀಫ್ ಬಾಲಕಿಗೆ ಮಾಂಸ ಕೊಡಿಸುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈತನ ಕೃತ್ಯದಿಂದ ಗಾಬರಿಗೊಂಡ ಬಾಲಕಿ ಬೊಬ್ಬೆ ಇಟ್ಟುಕೊಂಡು ಓಡಿ ತಪ್ಪಿಸಿಕೊಂಡು ಬಂದಿದ್ದಾಳೆ. ಈ  ಸಂದರ್ಭ ಅದೇ ದಾರಿಯಲ್ಲಿ ಬೈಕ್ ನಲ್ಲಿ ಬರುತ್ತಿದ್ದ ಸಾಮಾಜಿಕ ಕಾರ್ಯಕರ್ತ ತಲಪಾಡಿಯ ಯಶಸ್ವಿಯಾದ ಪಕ್ಕಳ ಬಾಲಕಿಯನ್ನು  ವಿಚಾರಿಸಿದ್ದಾರೆ.

ಈ ವೇಳೆ ನಡೆದ ಕೃತ್ಯವನ್ನು ಬಾಲಕಿ ತಿಳಿಸುತ್ತಿದ್ದಂತೆ, ಸ್ಥಳೀಯರಿಗೆ ಮಾಹಿತಿ ನೀಡಿದ ಅವರು ಸಹಕಾರದೊಂದಿಗೆ ಆರೋಪಿ ಆರೀಫ್ ಪಾಷಾನಿಗೆ ಧರ್ಮದೇಟು ನೀಡಿ ಉಳ್ಳಾಲ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.  

ಈತನ ಮೇಲೆ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಲಾಗಿದೆ.