ಕ್ರೈಸ್ತರ ಪವಿತ್ರ ಕಾಲದ ಪವಿತ್ರತೆಯನ್ನು ಇನ್ನಷ್ಟು ಆಳವಾಗಿ ಅನುಭವಿಸುವ ಉದ್ದೇಶದಿಂದ ಪುತ್ತೂರು ಧರ್ಮ ಪ್ರಾಂತ್ಯದ ಬೈಬಲ್ ಕನ್ವೆನ್ಷನ್ ಕಾರ್ಯಕ್ರಮವು ಇಂದು ಸಂಜೆ 5 ಗಂಟೆಯಿಂದ ನೂಜಿಬಾಳ್ತಿಲದ ಬೆಥನಿ ಹೈಸ್ಕೂಲ್ ಮೈದಾನ, ಮಾರ್ ದಿವನ್ನಾಸಿಯೋಸ್ ನಗರದಲ್ಲಿ ಭಕ್ತಿಭಾವದಿಂದ ಆರಂಭಗೊಳ್ಳಲಿದೆ.
ಫೆಬ್ರವರಿ 9, 10 ಮತ್ತು 11ರಂದು ಪ್ರತಿದಿನ ಸಂಜೆ 5ರಿಂದ ರಾತ್ರಿ 8.30ರವರೆಗೆ ನಡೆಯುವ ಈ ವಿಶೇಷ ಕಾರ್ಯಕ್ರಮವನ್ನು ಕೇರಳದ ಖ್ಯಾತ ಧ್ಯಾನ ಗುರುಗಳು, ಶಾಲೊಂ ಟಿವಿ, ಗುಡ್ನೆಸ್ ಟಿವಿ ಸೇರಿದಂತೆ ಟೆಲಿವಿಷನ್ ಕಾರ್ಯಕ್ರಮಗಳ ಮೂಲಕ ಪ್ರಸಿದ್ಧರಾಗಿರುವ ಮತ್ತು ಮೌಂಟ್ ಕಾರ್ಮಲ್ ಧ್ಯಾನ ಕೇಂದ್ರ ತಿರುವನಂತಪುರ ಇದರ ನಿರ್ದೇಶಕರೂ ಆಗಿರುವ ರೆ.ಫಾ. ಡ್ಯಾನಿಯಲ್ ಪೂವಣ್ಣತ್ತಿಲ್ ಅವರು ನಡೆಸಿಕೊಡಲಿದ್ದಾರೆ.
ಯೇಸು ಕ್ರಿಸ್ತನ ಪ್ರೀತಿ, ಕ್ಷಮೆ, ಪಶ್ಚಾತ್ತಾಪ, ನವಜೀವನ ಮತ್ತು ಆತ್ಮೀಯ ಪರಿವರ್ತನೆ ಕುರಿತ ಪ್ರೇರಣಾದಾಯಕ ಉಪನ್ಯಾಸಗಳು ಹಾಗೂ ಪ್ರಾರ್ಥನಾ ಸೇವೆಗಳು,ಗಾನ ಶುಶ್ರೂಷೆಗಳು ನಡೆಯಲಿವೆ.
ಈ ಕಾರ್ಯಕ್ರಮವನ್ನು ಸಿರೋ-ಮಲಂಕರ ಕ್ಯಾಥೋಲಿಕ್ ಧರ್ಮಸಭೆ ಹಾಗೂ ಪುತ್ತೂರು ಧರ್ಮಪ್ರಾಂತ್ಯದ ಆಶ್ರಯದಲ್ಲಿ ವಂದನೀಯ ಬಿಷಪ್ ಗೀವರ್ಗೀಸ್ ಮಾರ್ ಮಕಾರಿಯೋಸ್ ಅವರ ಮುಂದಾಳತ್ವದಲ್ಲಿ ಆಯೋಜಿಸಲಾಗಿದ್ದು, ವಿವಿಧ ಕಡೆಗಳಿಂದ ಧರ್ಮಗುರುಗಳು, ಧರ್ಮ ಭಗಿನಿಯರು, ಭಕ್ತರು ಭಾಗವಹಿಸಲಿದ್ದಾರೆ.