ಬಜಾಲ್ ಅಂಚೆ ಕಚೇರಿಯ ಡಾಕ್ ಸೇವಕ್ ಉಮೇಶ ಅವರಿಗೆ ವಿದಾಯ ಸಮಾರಂಭ

ಮಂಗಳೂರು: ಬಜಾಲ್ ಅಂಚೆ ಕಚೇರಿಯಲ್ಲಿ ಸುಮಾರು 27 ವರ್ಷಗಳ ಕಾಲ ಡಾಕ್ ಸೇವಕ್ (ಪೋಸ್ಟ್‌ಮ್ಯಾನ್) ಆಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ  ಉಮೇಶ ಅವರ ನಿವೃತ್ತಿ ಅಂಗವಾಗಿ ಸೋಮವಾರ ( ಫೆ.23)  ಬಜಾಲ್ ಚರ್ಚ್ ಹಾಲ್‌ನಲ್ಲಿ ವಿಶೇಷ ಗೌರವ ಸಮಾರಂಭ ನಡೆಯಿತು.



ಈ ಸಂದರ್ಭದಲ್ಲಿ ಶ್ರೀ ಉಮೇಶ ಅವರನ್ನು ಶಾಲು ಹೊದಿಸಿ, ಸನ್ಮಾನಿಸಿ, ಸ್ಮರಣಿಕೆ ಹಾಗೂ ಗೌರವಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಅಂಚೆ ಅಧೀಕ್ಷಕರಾದ  ದಿನೇಶ್ ಪಿ. ಅವರು, ಉಮೇಶ್ ಅವರು ತಮ್ಮ ಸೇವಾ ಅವಧಿಯಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದ್ದು, ವಿನಮ್ರ ಸ್ವಭಾವದ ಉತ್ತಮ ವ್ಯಕ್ತಿಯಾಗಿದ್ದಾರೆ ಎಂದು ಶ್ಲಾಘಿಸಿದರು. ಅವರ ನಿವೃತ್ತ ಜೀವನ ಸುಖಮಯವಾಗಿರಲೆಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಜಾಲ್ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಶ್ರೀಮತಿ ಪುಷ್ಪಾ ವಿನೋದ್ ಪುದು ಅವರು ಮಾತನಾಡಿ, ಪೋಸ್ಟ್‌ಮ್ಯಾನ್ ಕೆಲಸವು ಸುಲಭದ ಕೆಲಸವಲ್ಲ, ಬಿಸಿಲು, ಮಳೆ ಮತ್ತು ದೂರದ ಪ್ರದೇಶಗಳಲ್ಲಿಯೂ ಜನರಿಗೆ ಅಂಚೆ ಸೇವೆ ತಲುಪಿಸುವ ಮಹತ್ತರ ಜವಾಬ್ದಾರಿಯಿದೆ ಎಂದು ತಿಳಿಸಿದರು. ಆ ಜವಾಬ್ದಾರಿಯನ್ನು ಉಮೇಶ ಅವರು ಎಂದಿಗೂ ಲಘುವಾಗಿ ತೆಗೆದುಕೊಳ್ಳದೆ ಶಿಸ್ತು, ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿರುವುದಾಗಿ ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ಉಪವಿಭಾಗದ ಅಂಚೆ ನಿರೀಕ್ಷಕರಾದ ಶ್ರೀಮತಿ ಸುಪ್ರಿಯಾ ಎಸ್. ಎನ್., ಕೊಡಿಯಾಲಬೈಲ್ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ (HSG–I) ಶ್ರೀ ಶೈಲೇಶ್ ಕುಮಾರ್, ಹೋಲಿ ಸ್ಪಿರಿಟ್ ಚರ್ಚ್ ಬಜಾಲ್‌ನ ಧರ್ಮಗುರು ಫಾದರ್ ಲಿಯೋ ಲೋಬೋ, ನಿವೃತ್ತ ಹಿರಿಯ ಅಂಚೆ ಅಧೀಕ್ಷಕರಾದ ಶ್ರೀ ಟಿ.ಜಿ. ನಾಯಕ್ ಹಾಗೂ ಡಾ. ಐ.ಬಿ. ಪಲ್ಲಾಡೆ ಅವರು ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು  ಚಿರಾಗ್  ಅವರು ನಿರ್ವಹಿಸಿದರು.