ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಬ್ಯಾಗ್ನಿಂದ ಚಿನ್ನಾಭರಣ ಕಳವು: ಐವರು ಬಂಧಿತರು
ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಬ್ಬ ಮಹಿಳಾ ಪ್ರಯಾಣಿಕರ ಚೆಕ್-ಇನ್ ಬ್ಯಾಗ್ನಿಂದ ಚಿನ್ನಾಭರಣ ಕಳವು ಮಾಡಿರುವ ಪ್ರಕರಣ ಸಂಬಂಧ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಏರ್ ಇಂಡಿಯಾ SATS ಸಿಬ್ಬಂದಿ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ತಾಲೂಕು ಕಂದಾವರದ ನಿವಾಸಿ ನಿತಿನ್, ಮೂಡುಪೆರಾರ ನಿವಾಸಿಗಳಾದ ಸದಾನಂದ ಮತ್ತು ರಾಜೇಶ್, ಬಜಪೆ ನಿವಾಸಿ ಪ್ರವೀಣ್ ಫೆರ್ನಾಂಡಿಸ್, ಹಾಗೂ ಕಳವಾದ ಚಿನ್ನಾಭರಣ ಖರೀದಿಸಿದ ಮೂಡುಪೆರಾರದ ನಿವಾಸಿ ರವಿರಾಜ್ ಅರೆಸ್ಟ್ ಆದವರು.
ಪ್ರಕರಣದ ಹಿನ್ನೆಲೆ
ಆಗಷ್ಟ್ 30ರಂದು ಬೆಂಗಳೂರಿನಿಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾಣದಲ್ಲಿ ಪ್ರಯಾಣಿಸಿದ ಮಹಿಳೆಯೊಬ್ಬರು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ಬ್ಯಾಗೇಜ್ ಬೆಲ್ಟ್ನಿಂದ ತಮ್ಮ luggage ಪಡೆದು ಪರೀಕ್ಷಿಸಿದಾಗ 56 ಗ್ರಾಂ ತೂಕದ ಚಿನ್ನಾಭರಣ (ಮೌಲ್ಯ ₹4.5 ಲಕ್ಷ) ಕಾಣೆಯಾಗಿರುವುದು ಗೊತ್ತಾಗಿತ್ತು. ಈ ಬಗ್ಗೆ ಆಕೆಯು ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಅ.ಕ್ರ. 157/2025 ದೂರು ಸಂಖ್ಯೆಯಡಿ ಕಳವು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು.
ತನಿಖೆಯ ಫಲಿತಾಂಶ
ಪೊಲೀಸರು ನಿತಿನ್, ಸದಾನಂದ, ರಾಜೇಶ್ ಮತ್ತು ಪ್ರವೀಣ್ ಫೆರ್ನಾಂಡಿಸ್ ಎಂಬ ಏರ್ ಇಂಡಿಯಾ SATS ಸಿಬ್ಬಂದಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ಆರೋಪಿಗಳು ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ಲಗೇಜ್ನಿಂದ ಚಿನ್ನಾಭರಣ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ಚಿನ್ನಾಭರಣವನ್ನು ಅವರು ಮೂಡುಪೆರಾರದ ರವಿರಾಜ್ ಅವರಿಗೆ ಮಾರಿದ್ದು ಗೊತ್ತಾಗಿದೆ. ತನಿಖೆಯಲ್ಲಿ ಸುಮಾರು ₹5 ಲಕ್ಷ ಮೌಲ್ಯದ 50 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ. ರವಿರಾಜ್ ಅವರನ್ನು ಕಳವು ಮಾಲು ಸ್ವೀಕರಿಸಿದ ಆರೋಪದಡಿ (ಬಿ.ಎನ್.ಎಸ್ ಕಲಂ 317(2)) ಬಂಧಿಸಲಾಗಿದೆ.
ಮತ್ತೊಂದು ಪ್ರಕರಣ
ವಿಚಾರಣೆಯಲ್ಲಿ ಆರೋಪಿಗಳು 2025ರ ಜನವರಿಯಲ್ಲಿ ಮತ್ತೊಂದು ಪ್ರಯಾಣಿಕ ಮನೋಹರ್ ಶೆಟ್ಟಿ ಅವರ ಬ್ಯಾಗ್ನಿಂದ ₹2 ಲಕ್ಷ ನಗದು ಕಳವು ಮಾಡಿದ್ದು ಬಹಿರಂಗವಾಗಿದೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಅ.ಕ್ರ. 27/2025 ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಎಲ್ಲಾ ಆರೋಪಿಗಳು ಕಳೆದ 9 ವರ್ಷಗಳಿಂದ ಏರ್ ಇಂಡಿಯಾ SATS ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮುಂದಿನ ಕ್ರಮ
ಬಂಧಿತರಾದ ಐವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಮತ್ತಷ್ಟು ತನಿಖೆಗಾಗಿ ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಎಚ್ಚರಿಕೆ ಮತ್ತು ಸಲಹೆ
ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಪ್ರಯಾಣಿಕರ ಚೆಕ್-ಇನ್ ಬ್ಯಾಗ್ಗಳಲ್ಲಿ ಚಿನ್ನ, ನಗದು ಇತ್ಯಾದಿ ದುಬಾರಿ ವಸ್ತುಗಳನ್ನು ಗುರಿಯಾಗಿಸಿಕೊಂಡು, ದುರ್ಬಲ ಲಾಕ್ಗಳು ಅಥವಾ ಸರಳ ಪಾಸ್ವರ್ಡ್ಗಳನ್ನು ಬಳಸಿ ಕಳವು ಮಾಡುತ್ತಿದ್ದರು ಎಂದು ಗೊತ್ತಾಗಿದೆ. ಪ್ರಯಾಣಿಕರು ಸುರಕ್ಷತೆಯ ದೃಷ್ಟಿಯಿಂದ ಜಾಗ್ರತೆಯಿಂದ ಇರಬೇಕೆಂದು ಪೊಲೀಸ್ ಆಯುಕ್ತರು ಸಲಹೆ ನೀಡಿದ್ದಾರೆ.