ರಾಖಿ ಕಟ್ಟಿದ್ದವಳನ್ನೇ ಮದುವೆಯಾಗಲು ಪೀಡಿಸಿದ ಕಾಮುಕ- ಐದನೇ ಮಹಡಿಯಿಂದ ತಳ್ಳಿ ಕೊಂದೇ ಬಿಟ್ಟ
ನವದೆಹಲಿ: ಮದುವೆಯಾಗಲು ಒಲ್ಲೆ ಎಂದದ್ದಕ್ಕೆ ಯುವಕನೋರ್ವನು ಅನ್ಯಕೋಮಿನ ಯುವತಿಯ ಮನೆಗೇ ನುಗ್ಗಿ ಆಕೆಯನ್ನು ಐದನೇ ಮಹಡಿಯಿಂದ ಕೆಳಗೆ ತಳ್ಳಿ ಕೊಂದಿರುವ ಘಟನೆ ದೆಹಲಿಯ ಜ್ಯೋತಿನಗರ ಪ್ರದೇಶದಲ್ಲಿ ನಡೆದಿದೆ.
ನೇಹಾ ಮೃತ ಯುವತಿ. ತೌಫಿಕ್ ಕೊಲೆಗೈದ ಆರೋಪಿ. ಘಟನೆಯ ಬಳಿಕ ತೌಫಿಕ್ನನ್ನು ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ತಾಂಡಾದಿಂದ ಬಂಧಿಸಲಾಗಿದೆ.
ಆರೋಪಿ ತೌಫಿಕ್, ಬುರ್ಖಾ ಧರಿಸಿ ನೇಹಾ ಮನೆಯನ್ನು ಪ್ರವೇಶಿಸಿದ್ದ. ಆಗ ನೇಹಾ ತಂದೆ ತಡೆಯಲು ಬಂದಾಗ ಅವರನ್ನು ಪಕ್ಕಕ್ಕೆ ತಳ್ಳಿ ನೇರವಾಗಿ ಟೆರೇಸ್ಗೆ ಹೋಗಿದ್ದಾನೆ. ಅಲ್ಲಿ ನೇಹಾ ನೀರಿನ ಟ್ಯಾಂಕ್ ಪರಿಶೀಲಿಸುತ್ತಿದ್ದಳು. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ನಂತರ ತೌಫಿಕ್ ಆಕೆಯನ್ನು ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ. ಐದನೇ ಮಹಡಿಯಿಂದ ಬಿದ್ದ ಪರಿಣಾಮ ನೇಹಾ ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಆಕೆಯನ್ನು ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರು ಎಷ್ಟೇ ಪ್ರಯತ್ನ ಪಟ್ಟರೂ ಉಳಿಸಿಕೊಳ್ಳಲಾಗಲಿಲ್ಲ.
ತೌಫಿಕ್ ಹಾಗೂ ನೇಹಾ ಮೂರು ವರ್ಷಗಳಿಂದ ಪರಿಚಯವಿದ್ದರು. ಆಕೆ ಆತನನ್ನು ಸಹೋದರನಂತೆ ಕಾಣುತ್ತಿದ್ದಳು. ರಾಖಿ ಹಬ್ಬದ ದಿನ ಆತನಿಗೂ ರಾಖಿ ಕಟ್ಟಿದ್ದಳು ಎಂದು ತಿಳಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಆತ ತನ್ನನ್ನು ಮದುವೆಯಾಗುವಂತೆ ಒತ್ತಡ ಹಾಕಿದ್ದ ಆದರೆ ಆಕೆ ಅದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಳು.
ತೌಫಿಕ್ ಒಂದು ತಿಂಗಳಿನಿಂದ ನಿರಂತರ ಕಿರುಕುಳ ನೀಡುತ್ತಿದ್ದ, ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಮತ್ತು ಬೆದರಿಕೆ ಹಾಕುತ್ತಿದ್ದ ಎಂದು ನೇಹಾಳ ಸಹೋದರಿ ಹೇಳಿದ್ದಾಳೆ. ಘಟನೆಗೆ ಕೆಲವೇ ದಿನಗಳ ಮೊದಲು, ನೇಹಾ ತನ್ನ ತಾಯಿಗೆ ಕಿರುಕುಳದ ಬಗ್ಗೆ ಹೇಳಿದ್ದಳು.
ಮೂಲತಃ ಉತ್ತರ ಪ್ರದೇಶದವನಾದ ತೌಫಿಕ್ ದೆಹಲಿಯ ಮಂಡೋಲಿಯಲ್ಲಿ ಕೆಲಸ ಮಾಡುತ್ತಿದ್ದ. ಅಪರಾಧ ಸ್ಥಳದಿಂದ ಪರಾರಿಯಾಗಿದ್ದ ಆತನನ್ನು ರಾಂಪುರದಿಂದ ತಡರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.