ಮಂಗಳೂರು: ನಾಪತ್ತೆಯಾಗಿದ್ದ ಆಟೋ ಚಾಲಕನ ಮೃತದೇಹ ಅನುಮಾನಾಸ್ಪದವಾಗಿ ಮಂಜೇಶ್ವರದ ಕುಂಜತ್ತೂರು ಬಳಿಯ ಬಾವಿಯಲ್ಲಿ ಪತ್ತೆಯಾಗಿದೆ.
ಮಂಗಳೂರಿನ ಮುಲ್ಕಿಯ ಕೊಳ್ನಾಡು ನಿವಾಸಿ ಮಹಮ್ಮದ್ ಶರೀಫ್(52) ಮೃತಪಟ್ಟ ಆಟೋ ಚಾಲಕ.
ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಆಟೋ ಚಾಲಕರಾಗಿ ದುಡಿಯುತ್ತಿದ್ದ ಮಹಮ್ಮದ್ ಶರೀಫ್ ಎ.9ರಂದು ಬೆಳಗ್ಗೆ ಮುಲ್ಕಿಯ ಮನೆಯಿಂದ ಆಟೋದಲ್ಲಿ ಹೋಗಿದ್ದರು. ಆ ಬಳಿಕದಿಂದ ಅವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಂಗಳೂರಿನ ಮುಲ್ಕಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಇದೀಗ ಅವರು ಮೃತಪಟ್ಟ ಸ್ಥಿತಿಯಲ್ಲಿ ಕೇರಳದ ಮಂಜೇಶ್ವರದ ಕುಂಜತ್ತೂರು ಬಳಿಯ ಬಾವಿಯಲ್ಲಿ ಪತ್ತೆಯಾಗಿದ್ದಾರೆ. ಆ ಬಾವಿಯ ಸಮೀಪದಲ್ಲೇ ಶರೀಫ್ರ ಆಟೋ ರಿಕ್ಷಾ ಕೂಡ ಪತ್ತೆಯಾಗಿದೆ. ಬಾವಿಯ ಬಳಿ ಹಾಗೂ ಆಟೋರಿಕ್ಷಾದಲ್ಲಿ ರಕ್ತದ ಕಲೆಗಳು ಕಂಡು ಬಂದಿದೆ.
ಶರೀಫ್ರ ದೇಹದಲ್ಲೂ ಗಾಯದ ಗುರುತು ಪತ್ತೆಯಾಗಿದೆ. ಕೊಲೆ ಶಂಕೆ ಮೂಡಿದ್ದು, ಈ ಬಗ್ಗೆ ಕೇರಳದ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.