5.51ಲಕ್ಷ ವರದಕ್ಷಿಣೆ ಹಣ ಹಿಂದಿರುಗಿಸಿದ ವರ: ಆತನ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ
Tuesday, February 18, 2025
ರಾಜಸ್ಥಾನ: ಇಲ್ಲಿನ ಜೈಸರ್ ಜಿಲ್ಲೆಯ ಕರಾಲಿಯಾದಲ್ಲಿರುವ ಪಾಲಿ ಗ್ರಾಮದ ಯುವಕನೋರ್ವನು ಮದುವೆಯ ದಿನ ಪತ್ನಿ ಕಡೆಯವರು ನೀಡಿರುವ 5.51ಲಕ್ಷ ವರದಕ್ಷಿಣೆ ಹಣವನ್ನು ಹಿಂದಿರುಗಿಸಿ ಭಾರೀ ದೊಡ್ಡ ಬದಲಾವಣೆಗೆ ನಾಂದಿ ಹಾಡಿದ್ದಾನೆ.
ಪರಮವೀರ್ ರಾಥೋಡ್(30) ಫೆ.14ರಂದು ಜೈಸಲ್ಮೀರ್ನ ಕರಾಲಿಯಾ ಗ್ರಾಮದಲ್ಲಿ ನಿಕಿತಾ ಭಾಟಿ ಎಂಬ ಯುವತಿಯನ್ನು ವಿವಾಹವಾಗಿದ್ದಾರೆ. ವಿವಾಹ ಸಮಾರಂಭ ಸಂದರ್ಭ ವರ ಹಾಗೂ ಆತನ ಕುಟುಂಬ ಮಂಟಪಕ್ಕೆ ಬಂದಾಗ, ವಧುವಿನ ಕುಟುಂಬದವರು ಅವರಿಗೆ ಭವ್ಯ ಸ್ವಾಗತ ನೀಡಿದ್ದಾರೆ. ಈ ವೇಳೆ ವಿವಾಹ ಸಮಾರಂಭದ ಭಾಗವಾಗಿ ವರನಿಗೆ ೫,೫೧,೦೦೦ ವರದಕ್ಷಿಣೆ ನೀಡಲಾಯಿತು.ವರ ಪರಮವೀರ್ ರಾಥೋಡ್ ತನಗೆ ನೀಡಿರುವ ಹಣವನ್ನು ಮರಳಿ ವಧುವಿನ ಕುಟುಂಬಕ್ಕೆ ನೀಡಿದ್ದಾರೆ.
ಪತ್ನಿಯ ಕುಟುಂಬ ಮದುವೆಯ ಉಡುಗೊರೆಯಾಗಿ ಹಣ ನೀಡಲು ಪ್ರಯತ್ನಿಸಿದಾಗ, ವರ ರೋಥೋಡ್ ತಕ್ಷಣ ಅವರನ್ನು ತಡೆದಿದ್ದಾರೆ. ತಕ್ಷಣವೇ ತನ್ನ ತಂದೆ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ಮಾತನಾಡಿ, ಸಂಪೂರ್ಣ ವರದಕ್ಷಿಣೆ ಹಣವನ್ನು ಹಿಂತಿರುಗಿಸುವಂತೆ ತಿಳಿಸಿದನು. ಅದರಂತೆ, ಅವನ ಇಡೀ ಕುಟುಂಬ ಅವನಿಗೆ ಹಣವನ್ನು ನೀಡಿತು.
ಮಾಧ್ಯಮಗಳೊಂದಿಗೆ ಮಾತನಾಡಿದ ವರ ಪರಮವೀರ್ ರಾಥೋಡ್, ನಾನು ಉನ್ನತ ಶಿಕ್ಷಣ ಪಡೆದ ಬಳಿಕ, ನನ್ನ ಮದುವೆಯ ಸಂದರ್ಭದಲ್ಲಿ ನನ್ನಂತಹ ಜನರು ಬದಲಾವಣೆ ತರದಿದ್ದರೆ, ಯಾರು ತರುತ್ತಾರೆ? ಅದಕ್ಕೆ ನಾನು ಒಂದು ಉದಾಹರಣೆ ಕೊಡಲು ಬಯಸಿದ್ದೆ. ನನ್ನ ಪೋಷಕರು ನನ್ನ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ. ನನಗೆ ಬೆಂಬಲ ನೀಡಿದರು. ಇಂತಹ ದುಷ್ಟ ಪದ್ಧತಿಗಳನ್ನು ನಾವು ಕೊನೆಗೊಳಿಸದಿದ್ದರೆ, ಸಮಾಜದಲ್ಲಿ ಬದಲಾವಣೆ ತರುವುದು ಹೇಗೆ? ನಾವು ಪ್ರತಿಯೊಬ್ಬರೂ ಎಲ್ಲೋ ಪ್ರಾರಂಭಿಸಬೇಕು ಎಂದು ಹೇಳಿ ಪ್ರಶಂಸೆಗೆ ಪಾತ್ರರಾದರು.
ರಾಥೋಡ್ ಅವರ ತಂದೆ ಈಶ್ವರ್ ಸಿಂಗ್ ಕೂಡ ಇದೇ ರೀತಿಯ ಭಾವನೆಗಳನ್ನು ಪ್ರತಿಧ್ವನಿಸುತ್ತಾ ಮಾತನಾಡಿದರು. ತನ್ನ ಮಗನ ಮದುವೆಯ ವರದಕ್ಷಿಣೆಯ ಭಾಗವಾಗಿ ತನಗೆ ಒಂದು ತೆಂಗಿನಕಾಯಿ ಮತ್ತು ಒಂದು ರೂ. ನಾಣ್ಯ ಮಾತ್ರ ಬಂದಿದ್ದು, ವಧುವಿನ ಸಂಬಂಧಿಕರು ನೀಡಿದ ಎಲ್ಲಾ ಹಣವನ್ನು ಹಿಂದಿರುಗಿಸಿದ್ದೇನೆ ಎಂದು ಅವರು ಹೇಳಿದರು.