ಮೊಬೈಲ್ ನೋಡಬೇಡ ಎಂದದಕ್ಕೆ ಉಡುದಾರದಲ್ಲೇ ನೇಣುಬಿಗಿದು ಜೀವಬಿಟ್ಟ ಬಾಲಕ



ಬೆಂಗಳೂರು: ಓದುವುದಕ್ಕಿಂತ ಹೆಚ್ಚು ಮೊಬೈಲ್ ನೋಡುತ್ತೀಯಾ. ಇದು ಮಕ್ಕಳಿಗೆ ಒಳ್ಳೆಯದಲ್ಲ ಎಂದು ಮನೆಯಲ್ಲಿ ಬೈದು ಬುದ್ಧಿ ಹೇಳಿದ್ದಕ್ಕೆ ಮನನೊಂದ 13 ವರ್ಷದ ಬಾಲಕನೋರ್ವನು ತಂಗಿ ಮುಂದೆಯೇ ತನ್ನ ಉಡುದಾರದಿಂದ (ಸೊಂಟಕ್ಕೆ ಕಟ್ಟುವ ದಾರ) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರಾಜ್ಯ ರಾಜಧಾನಿ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಗೊಲ್ಲರಹಟ್ಟಿಯ ರತ್ನ‌ನಗರದಲ್ಲಿ ನಡೆದಿದೆ.

ಧ್ರುವ (13) ಮೃತಪಟ್ಟ ಬಾಲಕ. ತನ್ನ 3ತರಗತಿಯ ತಂಗಿ ಮುಂದೆಯೇ ಅಣ್ಣ ಅಳುತ್ತಲೇ ಸೊಂಟಕ್ಕೆ ಕಟ್ಟಿದ್ದ ಎರಡು ಜೋಡಿಯ ಉಡುದಾರವನ್ನು ಬಿಚ್ಚಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಅಣ್ಣ ಏನು ಮಾಡಿಕೊಳ್ಳುತ್ತಿದ್ದಾನೆಂದು ತಂಗಿ ನೋಡುತ್ತಿದ್ದಂತೆಯೇ ಆಕೆಯ ಕಣ್ಣ ಮುಂದೆ ಆತ ಸತ್ತೇ ಹೋಗಿದ್ದಾನೆ.


ಹೆಚ್ಚಾಗಿ ಮೊಬೈಲ್ ನೋಡುತ್ತಿದ್ದ ಬಾಲಕ ಧ್ರುವನಿಗೆ ಮನೆಯಲ್ಲಿ ಬೈದು ಬುದ್ಧಿ ಹೇಳಿದ್ದರು. ಆದರೂ, ಮನೆಯವರ ಮಾತು ಕೇಳದೆ ಅತಿಯಾಗಿ ಮೊಬೈಲ್ ವೀಕ್ಷಣೆ ಮಾಡುತ್ತಿದ್ದ. ಆದ್ದರಿಂದ, ಮನೆಯಲ್ಲಿ ಮೊಬೈಲ್ ಇಡದೇ ಬಾಲಕನ ತಂದೆ, ತಾಯಿ ತಮ್ಮೊಂದಿಗೆ ಮೊಬೈಲ್ ತೆಗೆದುಕೊಂಡು ಕೆಲಸಕ್ಕೆ ಹೋಗಿದ್ದರು. ಶಾಲೆ ಮುಗಿಸಿ ಬಂದಿದ್ದ ಅಣ್ಣ ಹಾಗೂ ತಂಗಿ ಇಬ್ಬರೇ ಮನೆಯಲ್ಲಿದ್ದರು. ಮೊಬೈಲ್ ಇಲ್ಲದ್ದರಿಂದ ಕುಪಿತಗೊಂಡ ಬಾಲಕ ಪ್ಯಾಂಟ್ ತೆಗೆದು ಸೊಂಟದಲ್ಲಿದ್ದ ಉಡುದಾರವನ್ನು ಬಿಚ್ಚಿಕೊಂಡು ಫ್ಯಾನ್‌ಗೆ ಕಟ್ಟಿದ್ದಾನೆ. ಬಳಿಕ ಅದನ್ನು ಕುತ್ತಿಗೆಗೆ ಬಿಗಿದುಕೊಂಡು ಒದ್ದಾಡಿದ್ದಾನೆ. ಆದರೆ, ತಂಗಿಗೆ ಅವನನ್ನು ರಕ್ಷಣೆ ಮಾಡುವುದು ಗೊತ್ತಾಗದೇ ಸುಮ್ಮನೇ ನೋಡುತ್ತಾ ನಿಂತಿದ್ದಾಳೆ.


ಸಂಜೆ 7ಗಂಟೆಗೆ ತಾಯಿ ಕೆಲಸದಿಂದ ಬಂದಿದ್ದಾರೆ. ಆಗ ಫ್ಯಾನ್‌ಗೆ ಉಡಿದಾರ ಬಿಗಿದುಕೊಂಡು ಅರೆಜೀವ ಸ್ಥಿತಿಯಲ್ಲಿದ್ದ ಬಾಲಕನ ಭಾರ ತಾಳದೇ ಉಡುದಾರ ತುಂಡಾಗಿ ಬಿದ್ದಿದ್ದಾನೆ. ತಕ್ಷಣ ತಾಯಿ ಗಾಬರಿಗೊಂಡು ಬಾಲಕನ್ನು ಸ್ಥಳೀಯರ ಸಹಾರದಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಬಾಲಕನನ್ನು ಪರೀಕ್ಷಿಸಿದ ವೈದ್ಯರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಬಾಲಕನ ತಂದೆ ಬಸವರಾಜ್ ಬೇಕರಿ ಕೆಲಸ ಮಾಡುತ್ತಿದ್ದರೆ, ತಾಯಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿ ಬಾಲಕ ಆತ್ಮಹತ್ಯೆಗೆ ಮಾಡಿಕೊಂಡಿರುವುದಕ್ಕೆ ಬೇರೆ ಏನಾದರೂ ಕಾರಣ ಇದೆಯೇ ಎಂದು ಪೊಲೀಸರು ಅನುಮಾನವಾಗಿದೆ.

BREAKING NEWS
Loading latest news...
Join our WhatsApp Channel Powered By : Online Pudu