ಮಂಗಳೂರು: ಒಳಚರಂಡಿ ಕಾಮಗಾರಿ ನಡೆಸುತ್ತಿದ್ದಾಗ ಮಣ್ಣು ಕುಸಿದು ಪಶ್ಚಿಮ ಬಂಗಾಳ ಮೂಲದ ಕಾರ್ಮಿಕ ಮೃತ್ಯು


ಮಂಗಳೂರು: ಒಳಚರಂಡಿ ಕಾಮಗಾರಿ ನಡೆಸುತ್ತಿದ್ದ ವೇಳೆ ಮಣ್ಣು ಕುಸಿದು ಪಶ್ಚಿಮ ಬಂಗಾಳ ಮೂಲದ ಕಾರ್ಮಿಕನೋರ್ವನು ಮೃತಪಟ್ಟ ಘಟನೆ ನಗರದ ಹೊಯಿಗೆಬೈಲುವಿನಲ್ಲಿ ನಡೆದಿದೆ.

ಪಶ್ಚಿಮ ಬಂಗಾಳ ಮೂಲದ ಕಮಲ್ ಹುಸೇನ್ (20) ಮೃತಪಟ್ಟ ಕಾರ್ಮಿಕ.

ಮೂವರು ಕಾರ್ಮಿಕರು ಏಳೆಂಟು ಅಡಿ ಆಳದ ಗುಂಡಿಯಲ್ಲಿ ಕಾಮಗಾರಿ ನಡೆಸುತ್ತಿದ್ದರು. ಈ ವೇಳೆ ಏಕಾಏಕಿ ಕೆಸರು ಮಣ್ಣು ಕುಸಿದು ಬಿದ್ದಿದೆ. ಆಗ ಮೂವರೂ ಕಾರ್ಮಿಕರು ಅದರಲ್ಲಿ ಸಿಲುಕಿದ್ದರು.
ತಕ್ಷಣ ಧಾವಿಸಿದ ಇತರ ಕಾರ್ಮಿಕರು ಹಾಗೂ ಸ್ಥಳೀಯರು ಇಬ್ಬರನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಆದರೆ ಕಮಲ್ ಹುಸೇನ್ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. 

ಈ ಬಗ್ಗೆ ಉರ್ವ ಠಾಣೆಯಲ್ಲಿ ದೂರು ದಾಖಲಾಗಿದೆ.