ಮಂಗಳೂರು: ಮನೆ ಮೇಲೆಯೇ ತಡೆಗೋಡೆ ಕುಸಿದು ಮಣ್ಣಿನಡಿ ಸಿಲುಕಿ ಬಾಲಕ ಮೃತ್ಯು


ಮಂಗಳೂರು: ಬುಧವಾರ ತಡರಾತ್ರಿ‌ ಸುರಿದ ಭಾರೀ ಗಾಳಿ‌ ಮಳೆಗೆ ತಡೆಗೋಡೆ ಮನೆಯ ಮೇಲೆ‌ಯೇ ಕುಸಿದು ಮಣ್ಣಿನಡಿ ಸಿಲುಕಿರುವ ಬಾಲಕನೋರ್ವ ಮೃತಪಟ್ಟ ಘಟನೆ ಮಂಗಳೂರಿನ ಜೋಕಟ್ಟೆ ಬಳಿ ನಡೆದಿದೆ. ಘಟನೆಯಲ್ಲಿ ಮನೆಮಂದಿ ಅಲ್ಪಸ್ವಲ್ಪ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮುಲ್ಕಿ ಕೊಲ್ನಾಡು‌ ಲಿಂಗಪ್ಪಯ್ಯ ಕಾಡು ನಿವಾಸಿ ಶೈಲೇಶ್(17) ಮೃತಪಟ್ಟ ಬಾಲಕ.

ಶೈಲೇಶ್ ಜೋಕಟ್ಟೆಯಲ್ಲಿರುವ ಸಂಬಂಧಿಕರ ಮನೆಗೆ ಅಥಿತಿಯಾಗಿ ಬಂದಿದ್ದ. ರಾತ್ರಿ ಮನೆಮಂದಿ ಊಟ ಮಾಡಿ ಮಲಗಿದ್ದರು. ಆದರೆ ತಡರಾತ್ರಿ ಸುರಿದ ಭಾರೀ ಗಾಳಿ - ಮಳೆಗೆ ಪಕ್ಕದವರ ತಡೆಗೋಡೆ ಇವರ ಮನೆ ಮೇಲೆಯೇ ಕುಸಿದು ಬಿದ್ದಿದೆ. ಪರಿಣಾಮ ಮನೆ ಸಂಪೂರ್ಣ ಕುಸಿದಿದೆ. ಈ ವೇಳೆ ಮಣ್ಣಿನಡಿಯಲ್ಲಿ ಸಿಲುಕಿದ್ದ ಶೈಲೇಶ್ ಸ್ಥಳದಲ್ಲೇ‌ ಮೃತಪಟ್ಟಿದ್ದಾನೆ. ತಕ್ಷಣ ಅಗ್ನಿ ಶಾಮಕ‌ದಳ ಸ್ಥಳಕ್ಕೆ ದೌಢಾಯಿಸಿ ಕಾರ್ಯಾಚರಣೆ ನಡೆಸಿ ಬಾಲಕನ ಮೃತದೇಹವನ್ನು ಹೊರ ತೆಗೆದಿದ್ದಾರೆ. ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.