ಸ್ಯಾಂಡಲ್ ವುಡ್ ಸಿನಿಮಾ ನಿರ್ಮಾಪಕ, ಉದ್ಯಮಿ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಶರಣು


ಬೆಂಗಳೂರು: ಕನ್ನಡದಲ್ಲಿ ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ, ಉದ್ಯಮಿ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ತಮ್ಮ ಸ್ವಗೃಹದಲ್ಲೇ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸೌಂದರ್ಯ ಜಗದೀಶ್ ಅವರ ಸಾವು ಚಿತ್ರೋದ್ಯಮಕ್ಕೆ ಆಘಾತ ನೀಡಿದ್ದು, ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅವರನ್ನು ತಕ್ಷಣ ರಾಜಾಜಿನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಜಗದೀಶ್ ನಿಧನರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಜಗದೀಶ್ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ನಿಖರ ಕಾರಣವೇನು ಎಂಬುದು ಬಹಿರಂಗವಾಗಿಲ್ಲ. ಆದರೆ ಮೂಲಗಳ ಪ್ರಕಾರ, ಇತ್ತೀಚೆಗೆ ಆರ್ಥಿಕವಾಗಿ ಜಗದೀಶ್ ಬಹಳ ನಷ್ಟದಲ್ಲಿದ್ದರು. ಮತ್ತು ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎಂಬ ಮಾತುಗಳು ಕೇಳಿಬಂದಿವೆ.

ಬಹುತಾರಾಗಣದ 'ಮಸ್ತ್ ಮಜಾ ಮಾಡಿ' ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಸೌಂದರ್ಯ ಜಗದೀಶ್ ಪ್ರವೇಶಿಸಿದ್ದರು. ಬಳಿಕ ತಮ್ಮ ಪುತ್ರನಿಗಾಗಿ 'ಅಪ್ಪು ಪಪ್ಪು' ಸಿನಿಮಾ ನಿರ್ಮಾಣ ಮಾಡಿದ್ದರು. ಪುತ್ರ ಸ್ನೇಹಿತ್ ಅವರನ್ನು ಚಿತ್ರರಂಗದಲ್ಲಿ ಬೆಳೆಸಬೇಕೆಂಬುದು ಅವರ ಗುರಿಯಾಗಿತ್ತು. ಇದರೊಂದಿಗೆ 'ಸ್ನೇಹಿತರು', 'ರಾಮ್ ಲೀಲಾ' ಸಿನಿಮಾಗಳನ್ನು ಕೂಡ ಸೌಂದರ್ಯ ಜಗದೀಶ್ ನಿರ್ಮಾಣ ಮಾಡಿದ್ದರು.

ಜಗದೀಶ್ ಪುತ್ರಿ ಸೌಂದರ್ಯ ವೈದ್ಯೆಯಾಗಿದ್ದು, ಕೆಲ ದಿನಗಳ ಹಿಂದಷ್ಟೇ ಅವರ ವಿವಾಹವನ್ನು ಅದ್ದೂರಿಯಾಗಿ ನೆರವೇರಿಸಿದ್ದರು. ಈ ಮದುವೆಗೆ ಚಿತ್ರರಂಗದ ಗಣ್ಯರು ಆಗಮಿಸಿದ್ದರು. ಪುತ್ರಿಯ ಮದುವೆ ಮಾಡಿ, ತಿಂಗಳು ಕಳೆಯುವುದರೊಳಗೆ ಜಗದೀಶ್ ಆತ್ಮಹತ್ಯೆಗೆ ಶರಣಾಗಿರುವುದು ಬೇಸರದ ಸಂಗತಿ.
BREAKING NEWS
Loading latest news...
Join our WhatsApp Channel Powered By : Online Pudu