ದೇವಾಲಯದ ಪ್ರಸಾದ ಸೇವಿಸಿ ಓರ್ವ ಮೃತ್ಯು, 80 ಮಂದಿ ಅಸ್ವಸ್ಥ

ಚಂದ್ರಾಪುರ: ಮಹಾರಾಷ್ಟ್ರದ ಚಂದ್ರಾಪುರ ಎಂಬಲ್ಲಿನ ಮಜ್ರಿ ಕಾಳಿಮಾತಾ ದೇವಸ್ಥಾನದಲ್ಲಿ ನವರಾತ್ರಿ ಪೂಜೆಯ ವೇಳೆ ಪ್ರಸಾದ ಸೇವಿಸಿ ಓರ್ವ ಮೃತಪಟ್ಟ ಘಟನೆ ನಡೆದಿದೆ. ಘಟನೆಯಲ್ಲಿ 80ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ. ಇವರ ಪೈಕಿ ಆರು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುಫೆನ್ ಯಾದವ್ (80) ಮೃತಪಟ್ಟ ವ್ಯಕ್ತಿ.

ಬೂಂದಿ ಪ್ರಸಾದ ಸೇವಿಸಿದ್ದವರಲ್ಲಿ ಮಾತ್ರ ವಾಂತಿ ಬೇಧಿಯಂಥಹ ವಿಷಪ್ರಾಶನದಿಂದ ಆಗಿರುವ ಅಸ್ವಸ್ಥತೆಯ ಲಕ್ಷಣಗಳು ಕಾಣಿಸಿಕೊಂಡಿವೆ. ಅಸ್ವಸ್ಥಗೊಂಡವರಲ್ಲಿ 30 ಮಂದಿ ಮಹಿಳೆಯರು ಹಾಗೂ 24 ಮಕ್ಕಳು ಸೇರಿದ್ದಾರೆ. ಎಲ್ಲರನ್ನೂ ಮಜ್ರಿಯ ಡಬ್ಲ್ಯುಸಿಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ವರೋರಾ ಉಪ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.

ಚಿಂತಾಜನಕ ಸ್ಥಿತಿಯಲ್ಲಿರುವ ಆರು ಮಂದಿಯನ್ನು ಚಂದ್ರಾಪುರದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಮೃತಪಟ್ಟ ಗುರುಫೆನ್ ಯಾದವ್ ಇತರ ಅಸ್ವಸ್ಥತೆಗಳೂ ಇದ್ದವು ಎಂದು ವೈದ್ಯರು ಹೇಳಿದ್ದಾರೆ. 24 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu