-->
1000938341
ಮಂಗಳೂರು: ಮಗುವನ್ನು ಅಪಹರಿಸಿ ಭಿಕ್ಷಾಟನೆಗೆ ಬಳಸಿದ ಭಿಕ್ಷುಕಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ

ಮಂಗಳೂರು: ಮಗುವನ್ನು ಅಪಹರಿಸಿ ಭಿಕ್ಷಾಟನೆಗೆ ಬಳಸಿದ ಭಿಕ್ಷುಕಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ

ಮಂಗಳೂರು: ಭಿಕ್ಷಾಟನೆಗೆ ಹೋಗಿದ್ದ ಭಿಕ್ಷುಕಿಯ ಮಗುವನ್ನು ಅಪಹರಿಸಿದ ಮತ್ತೋರ್ವ ಭಿಕ್ಷುಕಿಗೆ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ(ವಿಶೇಷ) ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮಂಗಳೂರಿಗೆ ಭಿಕ್ಷಾಟನೆಗೆಂದು ಬಂದಿದ್ದ ಆರೋಪಿತೆ  ರುಬಿಯಾ ಯಾನೆ ಫಾತಿಮಾ(44)ಗೆ  ಕಂಕನಾಡಿ ಜಂಕ್ಷನ್ ರೈಲ್ವೇ ಸ್ಟೇಷನ್ ಬಳಿ ಮತ್ತೊರ್ವ ಭಿಕ್ಷುಕಿ ಸಂಶಾದ್
ಪರಿಚಯವಾಗಿದೆ. 2017ರ ಜನವರಿ 12ರಂದು ಕಂಕನಾಡಿ ರೈಲ್ವೆ ಜಂಕ್ಷನ್ ಬಳಿಯ ವಾಹನಗಳ ಪಾರ್ಕಿಂಗ್ ಸ್ಥಳದಲ್ಲಿ 7 ತಿಂಗಳ ಹಸುಗೂಸು ಮುಬಾರಕನನ್ನು ಮಲಗಿಸಿ ಸಂಶಾದ್ ಭಿಕ್ಷಾಟನೆಗೆಂದು ಹೋಗಿದ್ದಳು. ಈ ಸಮಯವನ್ನು ನೋಡಿ ರುಬಿನಾ ಮಗುವನ್ನು ಅಪಹರಣ ಮಾಡಿದ್ದಾಳೆ.

 ಆ ಬಳಿಕ ಮಗುವಿನೊಂದಿಗೆ ಪರಾರಿಯಾಗಿದ್ದಾಳೆ. ಅಲ್ಲಿಂದ ಆ ಮಗುವನ್ನು ಹಿಡಿದುಕೊಂಡು ಊರೂರು ತಿರುಗಾಡಿ ಭಿಕ್ಷಾಟನೆ ಮಾಡುತ್ತಿದ್ದಳು. 2020ರ ಜನವರಿ 22 ರಂದು ಮೈಸೂರು ನಗರದ ಮಂಡಿ ಪೊಲೀಸ್ ಠಾಣಾ ಸರಹದ್ದಿನ ಮಂಡಿ ಮೊಹಲ್ಲಾ ಗ್ರಾಮದ, ಅಶೋಕ ರಸ್ತೆಯಲ್ಲಿರುವ ಮಸೀದ್-ಇ- ಅಜಮ್ ಮಸೀದಿಯ ಮುಂಭಾಗ ಮಗುವನ್ನು ಕುಳ್ಳಿರಿಸಿಕೊಂಡು  ಭಿಕ್ಷಾಟನೆಯನ್ನು ಮಾಡುತ್ತಿದ್ದಳು. ಅಲ್ಲದೆ, ಮಗುವಿನಿಂದಲೂ ಭಿಕ್ಷಾಟನೆಯನ್ನು ಮಾಡಿಸಿಕೊಂಡು ಶೋಷಣೆಗೆ ಒಳಪಡಿಸುತ್ತಿದ್ದ ಸಮಯ ಮಗುವನ್ನು ಕಳೆದುಕೊಂಡ‌ ಭಿಕ್ಷುಕಿ ಮಗು ಮುಬಾರಕನನ್ನು ಮತ್ತು ಆರೋಪಿತೆಯನ್ನು ಗುರುತಿಸಿದ್ದಾಳೆ.

ಈ ಪ್ರಕರಣವನ್ನು ಕಂಕನಾಡಿ ನಗರ ಪೊಲೀಸ್ ಠಾಣೆಯ ಅಂದಿನ ನಿರೀಕ್ಷಕ ರಾಮಕೃಷ್ಣ.ಕೆ.ಕೆ ಹಾಗೂ ಅಂದಿನ ಉಪನಿರೀಕ್ಷಕ ಪ್ರದೀಪ್.ಟಿ.ಆರ್. ಅವರು ಒಟ್ಟು 20 ಸಾಕ್ಷಿದಾರರನ್ನು ತನಿಖೆ ನಡೆಸಿದ್ದಾರೆ. ಆರೋಪಿತೆಯ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.‌ ನ್ಯಾಯಾಲಯದಲ್ಲಿ ಮಗುವಿನ ಜೈವಿಕ ತಾಯಿ  ಸಂಶಾದ್ ಎಂದು ವರದಿ ಬಂದಿತ್ತು

ಈ ಪ್ರಕರಣದ ವಿಚಾರಣೆಯು 2021 ಅಕ್ಟೋಬರ್ 5 ರಂದು ಪ್ರಾರಂಭಗೊಂಡಿದ್ದು, ಅಭಿಯೋಜನೆಯ ಪರ ಒಟ್ಟು 12 ಸಾಕ್ಷಿದಾರರನ್ನು ವಿಚಾರಣೆ ಮಾಡಲಾಗಿತ್ತು. ಮಂಗಳೂರಿನ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ(ವಿಶೇಷ) ನ್ಯಾಯಾಲಯದಲ್ಲಿ ಅಭಿಯೋಜನೆಯ ಸಾಕ್ಷ್ಯಾಧಾರವನ್ನು ಪರಿಗಣಿಸಿದ ನ್ಯಾಯಾಧೀಶರು  ಆರೋಪಿತೆಯ ವಿರುದ್ಧ ಫೆಬ್ರವರಿ 1 ರಂದು ಶಿಕ್ಷೆಯ ತೀರ್ಪನ್ನು ಪ್ರಕಟಿಸಿದ್ದು,4 ವರ್ಷ ಶಿಕ್ಷೆ 10 ಸಾವಿರ ದಂಡ ಪಾವತಿ , ದಂಡ ಪಾವತಿಸಲು ತಪ್ಪಿದಲ್ಲಿ 1 ತಿಂಗಳ ಸಾದಾ ಸಜೆ ಶಿಕ್ಷೆ ಆದೇಶವನ್ನು ನೀಡಿದ್ದಾರೆ.

 ಅಭಿಯೋಜನೆಯ ಪರ  ಜ್ಯೋತಿ ಪ್ರಮೋದ ನಾಯಕ ರವರು ಸಾಕ್ಷಿ ವಿಚಾರಣೆ ಮಾಡಿ ವಾದ ಮಂಡನೆಯನ್ನು ಮಾಡಿದ್ದರು.

Ads on article

Advertise in articles 1

advertising articles 2

Advertise under the article