ಮೂಡಬಿದಿರೆಯಲ್ಲಿ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ: 29ನೇ ಆಳ್ವಾಸ್ ವಿರಾಸತ್ಗೆ ವೇದಿಕೆ ಸಜ್ಜು
ಸಾಂಸ್ಕೃತಿಕ ಕೇಂದ್ರವಾಗಿರುವ ಮೂಡಬಿದಿರೆಯಲ್ಲಿ 29ನೇ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ಗೆ ಅದ್ಧೂರಿಯ ಸಿದ್ಧತೆ ನಡೆದಿದೆ. ಇಂದಿನಿಂದ ನಾಲ್ಕು ದಿನ ರಸದೌತಣಕ್ಕೆ ಆಳ್ವಾಸ್ ಸಾಕ್ಷಿಯಾಗಲಿದೆ.
ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಎಲ್ಲರಿಗೂ ಸಾಂಸ್ಕೃತಿಕ ರಸದೌತಣ ನೀಡುವ, ಮನ ತಣಿಸುವ ವಿರಾಸತ್, ಈ ಬಾರಿ ಡಿಸೆಂಬರ್ 14ರಿಂದ 17ರ ವರೆಗೆ ಮೂಡುಬಿದಿರೆಯ ಪುತ್ತಿಗೆ ಗ್ರಾಮದ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿದೆ.
ಈ ವೇದಿಕೆಯ ಸುತ್ತಮುತ್ತಲು "ಕೃಷಿ ಸಿರಿ" ವೇದಿಕೆ ಸೇರಿದಂತೆ ಆವರಣದಲ್ಲಿ "ಸಪ್ತ ಮೇಳ"ಗಳ ಸಂಗಮ ಇಲ್ಲಿಗೆ ಬರುವ ಪ್ರೇಕ್ಷಕರಿಗೆ ಮುದ ನೀಡಲಿದೆ. ಆಕರ್ಷಕ ಹಾಗೂ ವೈವಿಧ್ಯಮಯ ದೀಪಗಳ ಅಲಂಕಾರ, ಬೆಡಗು ವೈಶಿಷ್ಟ್ಯಪೂರ್ಣ ಕಲಾಕೃತಿಗಳು, ಸುಂದರ ಮನಮೋಹಕ ಪುಷ್ಪ-ಫಲಗಳಿಂದ ಗಂಧರ್ವ ಲೋಕವೇ ಸೃಷ್ಟಿಯಾಗಿದೆ. ಈ ಸೊಬಗನ್ನು, ಸಾಂಸ್ಕೃತಿಕ ಸಿರಿತನವನ್ನು ನೋಡಲು ಎರಡು ಕಣ್ಣುಗಳೇ ಸಾಲದು.