-->
1000938341
ಆಪರೇಷನ್ ಅಜಯ್: ಯುದ್ಧಪೀಡಿತ ಇಸ್ರೇಲ್ ನಿಂದ ಮೊದಲ ಏರ್ ಲಿಫ್ಟ್ ನಲ್ಲಿ ತಾಯ್ನಾಡಿಗೆ ಮರಳಿದ 212ಮಂದಿ ಭಾರತೀಯರು

ಆಪರೇಷನ್ ಅಜಯ್: ಯುದ್ಧಪೀಡಿತ ಇಸ್ರೇಲ್ ನಿಂದ ಮೊದಲ ಏರ್ ಲಿಫ್ಟ್ ನಲ್ಲಿ ತಾಯ್ನಾಡಿಗೆ ಮರಳಿದ 212ಮಂದಿ ಭಾರತೀಯರು


ನವದೆಹಲಿ: ಯುದ್ಧಪೀಡಿತ ಇಸ್ರೇಲ್​​​ನಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಮರಳಿ ತಾಯ್ನಾಡಿಗೆ ಕರೆತರಲು ಆಪರೇಷನ್​ ಅಜಯ್​ ಕಾರ್ಯಾಚರಣೆ ಆರಂಭವಾಗಿದೆ. 212 ಭಾರತೀಯರನ್ನು ಏರ್ ಲಿಫ್ಟ್ ಮಾಡಿರುವ ಮೊದಲ ವಿಶೇಷ ವಿಮಾನ ಶುಕ್ರವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

ಇಸ್ರೇಲ್​ನಿಂದ ಆಗಮಿಸಿದ ಭಾರತೀಯ ಪ್ರಜೆಗಳನ್ನು ಬರಮಾಡಿಕೊಳ್ಳಲು ಕೇಂದ್ರ ಸಚಿವ ರಾಜೀವ್​ ಚಂದ್ರಶೇಖರ್​ ಅವರು ವಿಮಾನ ನಿಲ್ದಾಣದಲ್ಲಿ ಖುದ್ದು ಹಾಜರಿದ್ದರು. ಗುರುವಾರ ಸಂಜೆ ಈ ವಿಶೇಷ ವಿಮಾನವು ಇಸ್ರೆಲ್​ನ ಟೆಲ್​ ಅವೀವ್​ನಲ್ಲಿರುವ ಬೆನ್​ ಗುರಿಯಾನ್​ ವಿಮಾನ ನಿಲ್ದಾಣದಿಂದ ಹೊರಟಿದೆ. ಈ ವಿಮಾನದಲ್ಲಿ 211 ವಯಸ್ಕರು ಮತ್ತು ಒಂದು ಮಗು ಸೇರಿದಂತೆ ಒಟ್ಟು 212 ಭಾರತೀಯರಿದ್ದರು. ಬೆನ್ ಗುರಿಯಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಸ್ರೇಲ್​​ನ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಇದು ಲಾಡ್ ನಗರದ ಉತ್ತರ ಹೊರವಲಯದಲ್ಲಿದೆ.

ಭಾರತೀಯರ ರಕ್ಷಣೆಗೆ ಇಸ್ರೇಲ್​ನಲ್ಲಿರುವ ಭಾರತೀಯ ಎಂಬೆಸಿ ಮಿಷನ್​ ಡೇಟಾಬೇಸ್​ ಅನ್ನು ಆರಂಭಿಸಿದೆ. ಮೊದಲು ಯಾರು ನೋಂದಾಯಿಸಿಕೊಂಡಿದ್ದಾರೋ ಅವರಿಗೆ ಮೊದಲ ಹಂತದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಪ್ರಯಾಣದ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ.

ಅ.7ರ ಶನಿವಾರ ಪ್ಯಾಲೆಸ್ತೈನ್​ನ ಹಮಾಸ್​ ಉಗ್ರರ ಗುಂಪು ಇಸ್ರೇಲ್​ ಮೇಲೆ ಏಕಾಏಕಿ 5 ಸಾವಿರ ರಾಕೆಟ್​ಗಳ ದಾಳಿ ನಡೆಸಿದೆ. ಬಳಿಕ ಇಸ್ರೇಲ್​ ಮತ್ತು ಹಮಾಸ್​ ಉಗ್ರರ ನಡುವೆ ಯುದ್ಧ ಆರಂಭವಾಗಿದೆ. ಯುದ್ಧ ಆರಂಭವಾದ ದಿನವೇ ಏರ್​ ಇಂಡಿಯಾ ವಿಮಾನ ಸಂಸ್ಥೆಯು ತನ್ನ ವಿಮಾನಗಳ ಸಂಚಾರವನ್ನು ಅಮಾನತಿನಲ್ಲಿ ಇಟ್ಟಿದೆ. ಈವರೆಗೂ ತನ್ನ ಕಾರ್ಯಾಚರಣೆಯನ್ನು ಏರ್​ ಇಂಡಿಯಾ ಆರಂಭಿಸಿಲ್ಲ. ಆದ್ದರಿಂದ ಇಸ್ರೇಲ್​ನಲ್ಲಿ ಸಿಲುಕಿ ಭಯದಲ್ಲೇ ದಿನ ಕಳೆಯುತ್ತಿರುವ ಭಾರತೀಯರ ನೆರವಿಗೆ ಕೇಂದ್ರ ಸರ್ಕಾರ ಆಪರೇಷನ್​ ಅಜಯ್​ ಹೆಸರಿನಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ.

ಯುದ್ಧದ ಭೀತಿಯಲ್ಲಿದ್ದ ಭಾರತೀಯರು ಸ್ವದೇಶಕ್ಕೆ ಹಿಂತಿರುಗಲು ‘ಆಪರೇಷನ್ ಅಜಯ್’ ಅಡಿಯಲ್ಲಿ ಟೆಲ್ ಅವಿವ್‌ನಿಂದ ಕಾರ್ಯನಿರ್ವಹಿಸುತ್ತಿರುವ ವಿಶೇಷ ವಿಮಾನ ಹತ್ತಲು ಉದ್ದನೆಯ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂದಿದೆ. ಇಸ್ರೇಲ್​ನಲ್ಲಿ 18 ಸಾವಿರ ಮತ್ತು ಪ್ಯಾಲೆಸ್ತೈನ್​ನಲ್ಲಿ 17 ಸಾವಿರ ಮಂದಿ ಭಾರತೀಯರಿದ್ದಾರೆ.

Ads on article

Advertise in articles 1

advertising articles 2

Advertise under the article