ಕಾಲೇಜಿನ ಶೌಚಾಲಯದಲ್ಲಿ ಯಾವುದೇ ರಹಸ್ಯ ಕ್ಯಾಮೆರಾ ಇರಿಸಲಾಗಿರಲಿಲ್ಲ- ಖುಷ್ಟೂ ಸುಂದರ್


ಉಡುಪಿ: ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಯಾವುದೇ ರಹಸ್ಯ ಕ್ಯಾಮೆರಾ ಇರಿಸಲಾಗಿರಲಿಲ್ಲ, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಟೂ ಸುಂದರ್ ಸ್ಪಷ್ಟಪಡಿಸಿದರು.



ಪ್ರಕರಣದ ವಿಚಾರಣೆ ನಡೆಸಲು ಗುರುವಾರ ಕಾಲೇಜಿಗೆ ಭೇಟಿನೀಡಿದ ಅವರು ಕಾಲೇಜಿನ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್‌ ಹಾಗೂ ಆಡಳಿತ ಮಂಡಳಿಯ ಪ್ರಮುಖರು, ಸಂತ್ರಸ್ತೆ ಹಾಗೂ ಕಾಲೇಜಿನ ಹಲವು ವಿದ್ಯಾರ್ಥಿನಿಯರ ಜತೆ  ಮಾತುಕತೆ ನಡೆಸಿದ ಬಳಿಕ ಈ ವಿಚಾರ ತಿಳಿಸಿದ್ದಾರೆ.

ಘಟನೆ ನಡೆದಿದೆ ಎನ್ನಲಾದ ಕಾಲೇಜಿನ ಶೌಚಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ಬೆಳಿಗ್ಗೆ 10 ಗಂಟೆಗೆ ಕಾಲೇಜು ಪ್ರವೇಶಿಸಿ  ಮಧ್ಯಾಹ್ನ 3ರವರೆಗೂ ವಿಚಾರಣೆ ನಡೆಸಿದರು.

ಪ್ರಕರಣ ಸಂಬಂಧ ಮಾಹಿತಿ ಕಲೆ ಹಾಕಿದ ಅವರು 'ಪೊಲೀಸ್‌ ಇಲಾಖೆ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗ ಪ್ರಕರಣದ ತನಿಖೆ ಆರಂಭಿಸಿದ್ದು ಪೂರ್ಣಗೊಳ್ಳುವವರೆಗೂ ಮಾಧ್ಯಮಗಳು ಆಧಾರ ರಹಿತ ಸುದ್ದಿಗಳನ್ನು ಪ್ರಕಟಿಸಬಾರದು. ವಿದ್ಯಾರ್ಥಿನಿಯರ ಮೊಬೈಲ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದ್ದು ವರದಿ ಬಂದ ನಂತರ ವಿಡಿಯೋ ಚಿತ್ರೀಕರಣದ ಸತ್ಯಾಸತ್ಯತೆ ಬಯಲಾಗಲಿದೆ ಎಂದರು.

ಈ ಸಂದರ್ಭ ಉಡುಪಿ ಜಿಲ್ಲಾ ಎಸ್‌ಪಿ ಹಾಕೆ ಅಕ್ಷಯ್ ಮಚ್ಚೆಂದ್ರ ಇದ್ದರು.