ಪ್ರಜ್ಞೆ ತಪ್ಪುವ ಔಷಧಿ ಬೆರೆಸಿದ ಜ್ಯೂಸ್ ನೀಡಿ ಯುವತಿಯ ಅತ್ಯಾಚಾರ: ಪ್ರಿಯತಮನೊಂದಿಗೆ ಆತನ ಸ್ನೇಹಿತನೂ ಜೈಲುಪಾಲು


ಬೆಂಗಳೂರು: ತೆಗೆದುಕೊಂಡ ಮೊಬೈಲ್‌ ವಾಪಸ್‌ ಕೊಡುವುನೆಂದು ಹೇಳಿ ಪ್ರೇಯಸಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಆಕೆ ಮೇಲೆ ಸ್ಮೇಹಿತನೊಂದಿಗೆ ಸೇರಿ ಪ್ರಿಯಕರನೇ ಅತ್ಯಾಚಾರಗೈದಿರುವ ಘಟನೆ ಗಿರಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಕಾಮುಕರನ್ನು ಬಂಧಿಸಿದ್ದಾರೆ.

ತುಮಕೂರಿನ ಕೊರಟಗೆರೆ ಮೂಲದ ಪುರುಷೋತ್ತಮ್‌ (22) ಹಾಗೂ ಗಿರಿನಗರ ಸಮೀಪದ ಈರಣ್ಣಗುಡ್ಡೆಯ ನಿವಾಸಿ ಚೇತನ್‌(22) ಬಂಧಿತ ಆರೋಪಿಗಯ. ‌

ತುಮಕೂರಿನ ಕೊರಟಗೆರೆ ಮೂಲದ 19 ವರ್ಷದ ಸಂತ್ರಸ್ತೆ ರ್ಯಾಪಿಡೋ ಕಂಪನಿಯಲ್ಲಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ ಪುರುಷೋತ್ತಮನೊಂದಿಗೆ ಪ್ರೇಮವಿತ್ತು. ಈಕೆ ತುಮಕೂರಿನ ಕಾಲೇಜುವೊಂದರಲ್ಲಿ ಪ್ಯಾರಾ ಮೆಡಿಕಲ್‌ ವ್ಯಾಸಂಗ ಮಾಡುತ್ತಿದ್ದಳು. ಚೇತನ್‌ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ. ಇವರು ಗಿರಿನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಕೆಲ ದಿನಗಳ ಹಿಂದೆ ತುಮಕೂರಿಗೆ ಹೋಗಿದ್ದ ಪುರುಷೋತ್ತಮ್ ಸಂತ್ರಸ್ತೆಯನ್ನು ಭೇಟಿಯಾಗಿದ್ದನು.  ಬೆಂಗಳೂರಿಗೆ ಬರುವ ವೇಳೆ ಆಕೆಯ ಮೊಬೈಲ್ ಫೋನ್ ಅನ್ನು ಪಡೆದುಕೊಂಡು ಬಂದಿದ್ದನು. ಮೊಬೈಲ್‌ ವಾಪಸ್‌ ಕೊಡುವಂತೆ ಸಂತ್ರಸ್ತೆ ಕೇಳಿದ ವೇಳೆ ಬೆಂಗಳೂರಿಗೆ ಬಂದರೆ ಮೊಬೈಲ್ ಹಿಂತಿರುಗಿಸುವುದಾಗಿ ಪುರುಷೋತ್ತಮ್ ಹೇಳಿದ್ದ. ಆದ್ದರಿಂದ ಜೂನ್‌ 7 ರಂದು ರಾತ್ರಿ 8.30ರ ಸುಮಾರಿಗೆ ಮೆಜೆಸ್ಟಿಕ್‌ಗೆ ಬಂದಿದ್ದಳು. ಈ ವೇಖೆ ಆಕೆಯನ್ನು ನೇರವಾಗಿ ಈರಣ್ಣಗುಡ್ಡೆಯಲ್ಲಿರುವ ಸ್ನೇಹಿತ ಚೇತನ್‌ ಮನೆಗೆ ರಾತ್ರಿ 10ಗಂಟೆಗೆ ಕರೆದುಕೊಂಡು ಹೋಗಿದ್ದಾನೆ. ಸಂತ್ರಸ್ತೆ ತನ್ನ ಮೊಬೈಲ್‌ ವಾಪಸ್ ಕೊಡು ಊರಿಗೆ ಹೋಗುತ್ತೇನೆ ಎಂದು ಹೇಳಿದ್ದಾಳೆ.

ಆಗ ಆತ ಇಂದು ತನ್ನೊಂದಿಗೆ ಉಳಿದುಕೊಳ್ಳುವಂತೆ ಆರೋಪಿ ಒತ್ತಾಯಿಸಿದ್ದಾನೆ. ಆದರೆ, ಸಂತ್ರಸ್ತೆ ಅದಕ್ಕೆ ನಿರಾಕರಿಸಿದ್ದಾಳೆ. ಆದ್ದರಿಂದ ಆಕೆಗೆ ಜ್ಯೂಸ್‌ನಲ್ಲಿ ಪ್ರಜ್ಞೆತಪ್ಪುವ ಔಷಧ ಬೆರೆಸಿ ಕುಡಿಸಿದ್ದಾನೆ. ಸಂತ್ರಸ್ತೆ ನಿದ್ರಾಹೀನ ಸ್ಥಿತಿಗೆ ತಲುಪಿದ ತಕ್ಷಣ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆ ಬಳಿಕ ಆತನ ಸ್ನೇಹಿತ ಚೇತನ್‌ ಕೂಡ ಆಕೆ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಎಚ್ಚರಗೊಂಡ ಯುವತಿ, ಚೇತನ್‌ ನನ್ನು ತಳ್ಳಿ ಹೊರಗಡೆ ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಬಳಿಕ ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ‌