ಸುಳ್ಯ: ಕಾಮಗಾರಿ ವೇಳೆ ಮಣ್ಣು ಕುಸಿದು ದಂಪತಿ ಸಹಿತ ಮೂವರು ಕಾರ್ಮಿಕರ ದಾರುಣ ಸಾವು


ಸುಳ್ಯ: ನಿರ್ಮಾಣ ಕಾಮಗಾರಿ ವೇಳೆ ಏಕಾಏಕಿ ಕುಸಿದ ಮಣ್ಣಿನಡಿ ಸಿಲುಕಿ ಮೂವರು ಕಾರ್ಮಿಕರು ದಾರುಣವಾಗಿ ಮೃತಪಟ್ಟ ಘಟನೆ ಸುಳ್ಯ ಪೇಟೆ ಸಮೀಪದ ಆಲೆಟ್ಟಿ ರಸ್ತೆಯ ಗುರುಂಪು ಎಂಬಲ್ಲಿ ಘಟನೆ ನಡೆದಿದೆ.

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಿರೇಗೊಡ್ಡೆಟ್ಟಿ ಮೂಲದ ಸೋಮಶೇಖರ್ ರೆಡ್ಡಿ (45), ಅವರ ಪತ್ನಿ ಶಾಂತಕ್ಕ (35) ಹಾಗೂ ಮೃತಪಟ್ಟ ಇನ್ನೊರ್ವರ ಹೆಸರು ಇನ್ನಷ್ಟೇ ತಿಳಿದುಬರಬೇಕಾಗಿದೆ.

ಸುಳ್ಯದ ವ್ಯಕ್ತಿಯೋರ್ವರು ತಮ್ಮ ಮನೆ ಹಿಂಭಾಗದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದರು. ಕಾರ್ಮಿಕರು ಇಂದು ಕೆಲಸ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ಮೇಲಿನಿಂದ ಮಣ್ಣು ಕುಸಿದು ಬಿದ್ದಿದೆ. ಘಟನೆಯ ವೇಳೆ ಏಳು ಮಂದಿ ಸ್ಥಳದಲ್ಲಿದ್ದು ನಾಲ್ವರು ಓಡಿ ಪಾರಾಗಿದ್ದಾರೆ. ಆದರೆ ಮೂವರು ಮಣ್ಣಿನಡಿ ಸಿಲುಕಿದ್ದರು. ಘಟನೆ ನಡೆದ ತಕ್ಷಣ ಜೇಸಿಬಿ ಮೂಲಕ ಮಣ್ಣಿನಡಿ ಸಿಲುಕಿದ್ದವರ ಹೊರತೆಗೆಯಲು ಕಾರ್ಯಾಚರಣೆ ಮಾಡಲಾಗಿದೆ. ಆದರೆ ಹೊರತಗೆಯುವ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಸಚಿವ ಎಸ್.ಅಂಗಾರ, ತಹಶೀಲ್ದಾರ್ ಮಂಜುನಾಥ್‌, ತಾಪಂ ಇಒ ಭವಾನಿಶಂಕರ್, ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಮುಖ್ಯಾಧಿಕಾರಿ ಸುಧಾಕರ್, ಸುಳ್ಯ ಪೊಲೀಸರು, ಅಗ್ನಿಶಾಮಕ ದಳದವರು ಮತ್ತಿತರರು ಭೇಟಿ ನೀಡಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu