ಮಂಗಳೂರು: ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅನ್ನು ರಾಜ್ಯದ ಜನತೆ ಡಸ್ಟ್ ಬೀನ್ ಗೆ ಹಾಕುತ್ತಾರೆ - ಸಿಎಂ ಬೊಮ್ಮಾಯಿ ಲೇವಡಿ

ಮಂಗಳೂರು: ಕಾಂಗ್ರೆಸ್ ನ ಗ್ಯಾರಂಟಿ ಕಾರ್ಡ್ ಗೆ ಯಾವ ಬೆಲೆಯೂ ಇಲ್ಲ.‌ ಅದನ್ನು ಬ್ಯಾಂಕ್ ನಲ್ಲಿ ಇಡುವುದಕ್ಕೆ ಆಗುತ್ತಾ. ಅದು ಉಪ್ಪಿನಕಾಯಿ ಹಾಕಿ ನೆಕ್ಕೋಕೆ ಆಗುತ್ತೆ. ಈ ಗ್ಯಾರಂಟಿ ಕಾರ್ಡ್ ವಿಸಿಟಿಂಗ್ ಕಾರ್ಡ್ ಅಷ್ಟೇ. ರಾಜ್ಯದ ಜನತೆ ಆ ಕಾರ್ಡ್ ನ್ನು ಡಸ್ಟ್ ಬೀನ್ ಗೆ ಹಾಕುತ್ತಾರೆ ಎಂದು ಸಿಎಂ ಬೊಮ್ಮಾಯಿಯವರು ಲೇವಡಿ ಮಾಡಿದರು.


ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ನವರು ಆಗದಿರುವುದನ್ನು ಹೇಳಿ ಜನರನ್ನು ನಂಬಿಸುತ್ತಿದ್ದಾರೆ. ಮಹಿಳೆಯರಿಗೆ 2 ಸಾವಿರ ತಿಂಗಳಿಗೆ ನೀಡಲು 20 ಸಾವಿರ ಕೋಟಿ ಬೇಕಾಗುತ್ತದೆ. ಹಣ ಕೊಟ್ಟರೆ ಎಲ್ಲಾ ಯೋಜನೆಗಳು ಬಂದ್ ಆಗುತ್ತದೆ. ಛತ್ತಿಸ್ ಗಢದಲ್ಲಿ ಇದೇ ರೀತಿಯ ಹೇಳಿಕೆ ಕೊಟ್ಟು 4 ವರ್ಷಗಳಾದರೂ ಕೊಟ್ಟಿಲ್ಲ. 200 ಯುನಿಟ್ ಉಚಿತ ವಿದ್ಯುತ್ ಅನ್ನೂ ಕೊಡುವುದಿಲ್ಲ.‌ ಜನರನ್ನು ಯಾಮಾರಿಸುತ್ತಾರೆ. ಎಲ್ಲಾ ಸಂದರ್ಭಗಳಲ್ಲೂ ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ ಎಂದರು.


ರಬ್ಬರ್ ಪ್ಲ್ಯಾಂಟೇಷನ್ ಟ್ಯಾಪರ್ ಗಳಿಗೆ ನೀಡುವ ಬೋನಸ್ ಅನ್ನು 8%ನಿಂದ 12%ಗಳಿಗೆ ಏರಿಕೆ ಮಾಡಲಾಗುತ್ತದೆ ಎಂದು ಸಭೆಯಲ್ಲಿ ಸಿಎಂ ಘೋಷಿಸುತ್ತಿದ್ದರು. ಈ ವೇಳೆ ಸಚಿವ ಅಂಗಾರ ವೇದಿಕೆಯಲ್ಲಿಯೇ ಅದನ್ನು 20%ಗೆ ಏರಿಕೆ ಮಾಡಬೇಕೆಂದು ಸಿಎಂಗೆ ಮನವಿ ಮಾಡಿದರು. ಅವರ ಮನವಿಗೆ ಅಸ್ತು ಎಂದ ಸಿಎಂ ಬೋನಸ್ ಅನ್ನು 12% ಏರಿಕೆ ಮಾಡಿ ಒಟ್ಟು 20% ಬೋನಸ್ ಕೊಡುವುದಕ್ಕೆ ತೀರ್ಮಾನಿಸಿದ್ದೇನೆ ಎಂದು ಫಲಾನುಭವಿಗಳ ಸಭೆಯಲ್ಲಿಯೇ ಘೋಷಣೆ ಮಾಡಿದರು.


ಕೇಂದ್ರ ಸರ್ಕಾರ ಅನ್ನದಾತ ರೈತನಿಗೆ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೊಳಿಸಿದೆ‌. ಮೋದಿ ಬರುವುದಕ್ಕಿಂತ ಮೊದಲು ಈ ಯೋಜನೆ ಇರಲಿಲ್ಲ. ಯುಪಿಎ ಸರ್ಕಾರ ಇದರ ದೊಡ್ಡ ದೊಡ್ಡ ಬ್ಯಾನರ್ ಗಳನ್ನು ಹಾಕುತ್ತಿದ್ದರು. ಆದರೆ ಯುಪಿಎ ಸರ್ಕಾರದ ಕಾಲದಲ್ಲಿ 85% ಮಧ್ಯವರ್ತಿಗಳ ಪಾಲಾಗುತಿತ್ತು. ಯುಪಿಎ ಕಾಲದಲ್ಲಿ 85% ಸರ್ಕಾರ ನಡೆಯುತಿತ್ತು. ಈಗ ಮಧ್ಯವರ್ತಿಗಳೇ ಇಲ್ಲದೇ ನೇರವಾಗಿ ಫಲಾನುಭವಿಗಳ ಖಾತೆಗೆ ಅನುದಾನ ಹೋಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.


ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಲು ಸಿಎಂ ಬೆಂಗಳೂರು ಎಚ್ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ನಗರದ ಮೇರಿಹಿಲ್ ನಲ್ಲಿರುವ ಹೆಲಿಪ್ಯಾಡ್ ನಲ್ಲಿ ಬಂದಿಳಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೆಲಿಪ್ಯಾಡ್ ಸುತ್ತ ಬಿಗಿ ಪೊಲೀಸ್ ಬಂದೋಬಸ್ತು ವ್ಯವಸ್ಥೆ ಮಾಡಲಾಗಿತ್ತು. 


ಈ ವೇಳೆ ಸಚಿವ ಸುನಿಲ್ ಕುಮಾರ್, ಶಾಸಕರುಗಳಾದ ಡಾ.ವೈ‌.ಭರತ್ ಶೆಟ್ಟಿ, ರಾಜೇಶ್ ನಾಯಕ್, ವೇದವ್ಯಾಸ ಕಾಮತ್ ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಪೊಲೀಸ್ ಅಧಿಕಾರಿಗಳು, ಸರಕಾರಿ ಅಧಿಕಾರಿಗಳು ಮತ್ತಿತರರು ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಅವರು ಪೊಲೀಸ್ ಬಿಗಿ ಬಂದೋಬಸ್ತು ವಾಹನದಲ್ಲಿ ಸಮಾವೇಶ ನಡೆಯುವ ಕರಾವಳಿ ಉತ್ಸವ ಮೈದಾನದೆಡೆಗೆ ತೆರಳಿದರು. 
BREAKING NEWS
Loading latest news...
Join our WhatsApp Channel Powered By : Online Pudu