ಎಚ್ಡಿ ಕೋಟೆ: ವಿವಾಹದ ಬಳಿಕ ಎಲ್ಲರೂ ಮಕ್ಕಳಾಗುವುದನ್ನು ಬಯಸುವುದು ಸಹಜ. ಆದರೆ ಇಲ್ಲೊಬ್ಬ ಯುವಕ ಮದುವೆಯಾಗಿ ಐದು ವರ್ಷಗಳಾದರೂ ಮಕ್ಕಳಾಗಿಲ್ಲವೆಂದು ಮನನೊಂದು ನೇಣಿಗೆ ಶರಣಾಗಿರುವ ಹೃದಯವಿದ್ರಾವಕಾರಿ ಘಟನೆ ನಡೆದಿದೆ.
ಹೆಚ್.ಡಿ.ಕೋಟೆ ತಾಲೂಕಿನ ಜಂಗಲ್ ರೆಸಾರ್ಟ್ ಸಿಬ್ಬಂದಿ ಧರ್ಮರಾಜು(28) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಹೆಚ್.ಡಿ.ಕೋಟೆ ತಾಲೂಕಿನ ಜಂಗಲ್ ರೆಸಾರ್ಟ್ನಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದ ಧರ್ಮರಾಜು ಕಳೆದ ಐದು ವರ್ಷಗಳಿಂದ ಮಕ್ಕಳಿಲ್ಲದ ಚಿಂತೆಯಲ್ಲಿದ್ದನು. ಮಕ್ಕಳಾಗದ ಬಗ್ಗೆ ಎಲ್ಲರೂ ಇವರನ್ನು ಕೇಳುತ್ತಿದ್ದರು ಎಂಬ ನೋವೂ ಇವರನ್ನು ಕಾಡುತ್ತಿತ್ತು. ಈ ಬಗ್ಗೆ ದಂಪತಿ ನಡುವೆ ಮಾತಿನ ಚಕಮಕಿಯೂ ನಡೆದಿತ್ತು. ಇದೇ ಹಿನ್ನೆಲೆಯಲ್ಲಿ ಪತ್ನಿ ತವರಿಗೆ ತೆರಳಿದ್ದರು.
ಆದ್ದರಿಂದ ಪತ್ನಿ ಇಲ್ಲದ ವೇಳೆ ಕರ್ತವ್ಯಕ್ಕೆ ರಜೆ ಹಾಕಿದ ಧರ್ಮರಾಜು, ವಸತಿ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸದ್ಯ ಅಹಸಜ ಸಾವಿನ ಬಗ್ಗೆ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.