-->
ಮಂಗಳೂರು: ಕನ್ನಡದ ಮುಸ್ಲಿಂ ಸಂವೇದನಾ ಬರಹಗಾರ್ತಿ ಸಾರಾ ಅಬೂಬಕ್ಕರ್ ಇನ್ನಿಲ್ಲ

ಮಂಗಳೂರು: ಕನ್ನಡದ ಮುಸ್ಲಿಂ ಸಂವೇದನಾ ಬರಹಗಾರ್ತಿ ಸಾರಾ ಅಬೂಬಕ್ಕರ್ ಇನ್ನಿಲ್ಲ

ಮಂಗಳೂರು: ಕನ್ನಡ ಖ್ಯಾತ ಸಾಹಿತಿ, ಮುಸ್ಲಿಂ ಸಂವೇದನಾ ಬರಹಗಾರ್ತಿ ಸಾರಾ ಅಬೂಕ್ಕರ್(86) ವಯೋಸಹಜ ಕಾರಣದಿಂದ ಮಂಗಳವಾರ ಮಧ್ಯಾಹ್ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 

ಮೂಲತಃ ಕಾಸರಗೋಡು ಜಿಲ್ಲೆಯ ಚಮನಾಡು ಗ್ರಾಮದವರಾದ ಅವರು ಮಂಗಳೂರಿನ ಲೇಡಿಹಿಲ್ ಬಳಿಯ ಹ್ಯಾಟ್ ಹಿಲ್ ನಲ್ಲಿ ವಾಸವಾಗಿದ್ದರು. ಮಹಿಳಾ ಸಮಾನತೆ, ಮಹಿಳಾ ಸಬಲೀಕರಣದ ಚಿಂತನೆ ಹೊಂದಿದ್ದ ಸಾರಾ ಅಬೂಬಕ್ಕರ್ ಅವರು ಕಥೆ, ಕಾದಂಬರಿ, ಪ್ರವಾಸ ಸಾಹಿತ್ಯ, ವೈಚಾರಿಕ ಲೇಖನಗಳು, ನಾಟಕ, ಅನುವಾದ ಹೀಗೆ ಹತ್ತು ಹಲವು ಸಾಹಿತ್ಯ ವಿಭಾಗದಲ್ಲಿ ಸಾಹಿತ್ಯ ಕೃಷಿ ಮಾಡಿದವರು. ಸಾರಾ ಅಬೂಬಕ್ಕರ್ ಅವರಿಗೆ ಚಂದ್ರಗಿರಿಯ ತೀರದಲ್ಲಿ ಕಾದಂಬರಿ ಕನ್ನಡ ಸಾಹಿತ್ಯ ಲೋಕದಲ್ಲಿ ಶಾಶ್ವತ ಸ್ಥಾನವನ್ನು ಕಲ್ಪಿಸಿಕೊಟ್ಟಿತು‌.

ಚಂದ್ರಗಿರಿ ತೀರದಲ್ಲಿ, ವಜ್ರಗಳು, ಸುಳಿಯಲ್ಲಿ ಸಿಕ್ಕವರು, ಪ್ರವಾಹ, ಸುಳಿ, ಚಪ್ಪಲಿಗಳು, ಪಂಜರ, ಇಳಿಜಾರು, ತೇಲಾಡುವ ಮೋಡಗಳು ಸೇರಿದಂತೆ ಹಲವಾರು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಮುಸ್ಲಿಂ ಸಂವೇದನಾ ದೃಷ್ಟಿಕೋನದಿಂದ ಮುಸ್ಲಿಂ ಮಹಿಳೆಯರ ತವಕ ತಲ್ಲಣಗಳನ್ನು ತಮ್ಮ ಕಥೆ, ಕಾದಂಬರಿಗಳಲ್ಲಿ ಚಿತ್ರಿಸುತ್ತಾ ಹೋಗಿದ್ದಾರೆ. ಸಾಹಿತಿಯಾಗಿ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 

ಇಂದು ರಾತ್ರಿ 8ಗಂಟೆಗೆ ಮಂಗಳೂರಿನ ಬಂದರ್ ನಲ್ಲಿರುವ ಜೀನತ್ ಭಕ್ಷ್ ಮಸೀದಿ ಆವರಣದಲ್ಲಿ ಅವರ ದಫನ ಕಾರ್ಯ ನಡೆಯಲಿದೆ. ಸಾರಾ ಅಬೂಬಕ್ಕರ್ ಅವರು ನಾಲ್ವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article