ಮಂಗಳೂರು: ಮೊಬೈಲ್ ಬಳಕೆಗೆ ಆಕ್ಷೇಪ ಮನನೊಂದು 14ರ ಬಾಲಕ ಆತ್ಮಹತ್ಯೆಗೆ ಶರಣು


ಮಂಗಳೂರು: ಅತಿಯಾಗಿ ಮೊಬೈಲ್ ಬಳಕೆ  ಮಾಡುವುದಕ್ಕೆ ತಾಯಿ ಆಕ್ಷೇಪ ವ್ಯಕ್ತಪಡಿಸಿ ಬುದ್ಧಿ ಮಾತು ಹೇಳಿದ್ದರಿಂದ ಮನನೊಂದ ಬಾಲಕ ದುಡುಕಿನ ನಿರ್ಧಾರ ತೆಗೆದುಕೊಂಡು ನೇಣಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಮಂಗಳೂರಿನಲ್ಲಿ ನಡೆದಿದೆ.

ನಗರದ ಪದವು ಬಿ ಗ್ರಾಮದ ಕೋಟಿಮುರದ ರೆಡ್ ಬ್ರಿಕ್ಸ್ ಫ್ಲ್ಯಾಟ್ ನಲ್ಲಿ ವಾಸ್ತವ್ಯವಿರುವ ಜಗದೀಶ್ ಎಂಬವರ ಪುತ್ರ ಜ್ಞಾನೇಶ್ (14) ಆತ್ಮಹತ್ಯೆಗೆ ಶರಣಾದ ಬಾಲಕ. ಈತ  ಕುಲಶೇಖರ ಬಳಿಯ ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿ.

ಜಗದೀಶ್ ಹಾಗೂ ವಿನಯಾ ದಂಪತಿಯ ಪುತ್ರನಾದ ಜ್ಞಾನೇಶ್ ಅತಿಯಾದ ಮೊಬೈಲ್ ಗೀಳು ಹತ್ತಿಸಿಕೊಂಡಿದ್ದ. ಜನವರಿ 30 ರಂದು ಮೊಬೈಲ್ ವೀಕ್ಷಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ತಾಯಿ ವಿನಯಾ ಗದರಿಸಿದ್ದರು. ಪರಿಣಾಮ ಮನನೊಂದ ಬಾಲಕ ಜ್ಞಾನೇಶ್ ಸ್ನಾನ ಮಾಡಿ ಬರುವುದಾಗಿ ಹೇಳಿ ಕೊಠಡಿಗೆ ಹೋದವನು ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ನಾನ ಮಾಡಲು ಹೋಗಿ ಬಹಳಷ್ಟು ಹೊತ್ತಾದರೂ ಬಾರದಿದ್ದಾಗ  ಬಾಲಕನ ತಂದೆ ಜಗದೀಶ್ ಬಾತ್ ರೂಮ್ ಬಳಿಯ ಕಿಟಕಿಯ ಮೂಲಕ ರೂಮಿನೊಳಗೆ ಹೋಗಿ ನೋಡಿದಾಗ ಬಾಲಕನು ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ತಕ್ಷಣ ಅವರು ನೇಣು ಬಿಗಿದ ವೇಲನ್ನು ಕತ್ತರಿಸಿ ಕೆಳಗೆ ಇಳಿಸಿ ನೋಡಿದ ವೇಳೆ ಬಾಲಕ ಮೃತಪಟ್ಟಿರುವುದು ಕಂಡುಬಂದಿದೆ.

ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu