ಆನೇಕಲ್: ಬರ್ಬರವಾಗಿ ಹತ್ಯೆ ಮಾಡಿ ಬೆಡ್ ಶೀಟ್ ನಲ್ಲಿ ಸುತ್ತಿಟ್ಟ ಮಹಿಳೆಯೋರ್ವರ ಮೃತದೇಹವು ಆಕೆಯ ಮನೆಯಲ್ಲಿಯೇ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಹೆಬ್ಬಗೋಡಿಯ ವಿನಾಯಕನಗರದಲ್ಲಿ ನಡೆದಿದೆ. ಇದರ ಬೆನ್ನಲ್ಲೇ ಆಕೆಯ ಪತಿ ಮೂರು ದಿನಗಳಿಂದ ನಾಪತ್ತೆಯಾಗಿದ್ದಾನೆಂದು ತಿಳಿದು ಬಂದಿದೆ.
ಬಿಜಾಪುರ ಮೂಲದ ಪಾರ್ವತಿ ಬಿರಾದರ್ ಕೊಲೆಯಾದ ಮಹಿಳೆ.
ದಂಪತಿ ಮೂರು ವರ್ಷಗಳ ಹಿಂದೆ ವಿನಾಯಕ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆದರೆ ಇಂದು ಮನೆಯೊಳಗಿಂದ ವಾಸನೆ ಬರಲಾರಂಭಿಸಿದೆ. ಈ ಹಿನ್ನೆಲೆಲೆಯಲ್ಲಿ ಮನೆ ಮಾಲಕರು ಪೊಲೀಸ್ ದೂರು ದಾಖಲಿಸಿದ್ದಾರೆ. ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ವಿಚಾರ ಬಹಿರಂಗಗೊಂಡಿದೆ.
ಮೂರು ದಿನಗಳ ಹಿಂದೆಯೇ ಈ ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಮತ್ತೊಂದೆಡೆ ಆಕೆಯ ಪತಿ ಮೂರು ದಿನಗಳಿಂದ ನಾಪತ್ತೆ ಆಗಿರುವುದು ತಿಳಿದು ಬಂದಿದೆ. ಈ ಬಗ್ಗೆ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.