-->

ಕೊರಗ ಸಮುದಾಯಕ್ಕೆ ವೈದ್ಯಕೀಯ ವೆಚ್ಚ: ಸರ್ಕಾರ ತಡೆದ ಕ್ರಮಕ್ಕೆ ವೈದ್ಯರ ಖಂಡನೆ

ಕೊರಗ ಸಮುದಾಯಕ್ಕೆ ವೈದ್ಯಕೀಯ ವೆಚ್ಚ: ಸರ್ಕಾರ ತಡೆದ ಕ್ರಮಕ್ಕೆ ವೈದ್ಯರ ಖಂಡನೆ

ಕೊರಗ ಸಮುದಾಯಕ್ಕೆ ವೈದ್ಯಕೀಯ ವೆಚ್ಚ: ಸರ್ಕಾರ ತಡೆದ ಕ್ರಮಕ್ಕೆ ವೈದ್ಯರ ಖಂಡನೆ






ಅತ್ಯಂತ ಹಿಂದುಳಿದ ಕೊರಗ ಸಮುದಾಯದವರು 'ಮದ್ಯಪಾನ ಮತ್ತು ಇತರ ದುಶ್ಚಟಗಳ ಕಾರಣದಿಂದ ತೀವ್ರತರ ಕಾಯಿಲೆಗಳಿಂದ ಬಳಲುತ್ತಿದ್ದು', ಅದೇ ಕಾರಣಕ್ಕೆ ಇನ್ನು ಮುಂದೆ ಅವರಿಗೆ ಯಾವುದೇ ವೈದ್ಯಕೀಯ ವೆಚ್ಚ ಮರುಪಾವತಿಗೆ ಅವಕಾಶವಿರುವುದಿಲ್ಲ ಎಂಬ ಆದೇಶವನ್ನು ಆಗಸ್ಟ್ 17, 2022ರಂದು ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಇಲಾಖೆಯ ಉಪಕಾರ್ಯದರ್ಶಿಯವರು ಆದೇಶವನ್ನು ಹೊರಡಿಸಿದ್ದಾರೆ.



ಈ ಆದೇಶಕ್ಕೆ ಕರಾವಳಿಯ ಮುಂಚೂಣಿ ವೈದ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ವೈದ್ಯರು, ಈ ಆದೇಶದಲ್ಲಿ ಹೇಳಿರುವ ವೈದ್ಯಕೀಯ ವೆಚ್ಚದ ನಿರಾಕರಣೆಯೂ, ಅದಕ್ಕಾಗಿ ಬಳಸಿರುವ ಭಾಷೆಯೂ, ನೀಡಿರುವ ಕಾರಣಗಳೂ ತೀರಾ ಆಕ್ಷೇಪಾರ್ಹವೂ, ಅವೈಜ್ಞಾನಿಕವೂ, ಸತ್ಯಕ್ಕೆ ದೂರವಾದವೂ ಆಗಿದ್ದು, ನಾವು ಅದನ್ನು ಬಲವಾಗಿ ಖಂಡಿಸುತ್ತೇವೆ ಮತ್ತು ಸರಕಾರವು ಈ ಕೂಡಲೇ ಈ ಆದೇಶವನ್ನು ಹಿಂಪಡೆದು ಕೊರಗ ಸಮುದಾಯದವರಿಗೆ ದೊರೆಯುತ್ತಿದ್ದ ವೈದ್ಯಕೀಯ ಸೌಲಭ್ಯಗಳೂ ಸೇರಿದಂತೆ ಸಕಲ ಸೌಲಭ್ಯಗಳನ್ನೂ ಹಿಂದಿನಂತೆಯೇ ಮುಂದುವರಿಸಬೇಕೆಂದು ಆಗ್ರಹಿಸುತ್ತೇವೆ ಎಂದಿದ್ದಾರೆ.



ಡಾ. ಪಿ. ವಿ. ಭಂಡಾರಿ, ಮನೋವೈದ್ಯಕೀಯ ತಜ್ಞರು, ಉಡುಪಿ ಮತ್ತು ಡಾ. ಶ್ರೀನಿವಾಸ ಕಕ್ಕಿಲ್ಲಾಯ, ವೈದ್ಯಕೀಯ ತಜ್ಞರು, ಮಂಗಳೂರು ಬಿಡುಗಡೆ ಮಾಡಿದ ಪ್ರಕಟಣೆಯ ಪ್ರತಿ ಇಲ್ಲಿದೆ...



ಮದ್ಯಪಾನ ಮತ್ತು ಇತರ ದುಶ್ಚಟಗಳ ಕಾರಣದಿಂದ ಕೊರಗ ಸಮುದಾಯದವರು ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂಬುದಕ್ಕೆ ಯಾವುದೇ ಕಾರಣವಿಲ್ಲ. ಹಾಗೆ ಹೇಳುವುದಿದ್ದರೆ ಕೊರಗ ಸಮುದಾಯದ ಮಕ್ಕಳು, ಮಹಿಳೆಯರು ಹಾಗೂ ಇತರರಿಗೆ ಉಂಟಾಗುವ ಯಾವುದೇ ಕಾಯಿಲೆಗಳಿಗೂ ಇದೇ ಕಾರಣ ಎಂದು ಹೇಳಬಹುದೇ...? ಹಾಗೆ ಅನ್ನುವುದಕ್ಕೆ ಯಾವುದಾದರೂ ವೈಜ್ಞಾನಿಕ ಆಧಾರ ಇದೆಯೇ..? ಇದ್ದರೆ ಸರಕಾರ ತಕ್ಷಣ ಆ ಬಗ್ಗೆ ದಾಖಲೆ ಬಿಡುಗಡೆ ಮಾಡಬೇಕು ಎಂದು ವೈದ್ಯರು ಆಗ್ರಹಿಸಿದ್ದಾರೆ.



ಆನಲೈನ್ ಜರ್ನಲ್ ಆಫ್ ಅಲೈಡ್ ಸಯನ್ಸ್ ನಲ್ಲಿ 2009 ರಲ್ಲಿ ಪ್ರಕಟವಾದ ಉಡುಪಿಯ ಕೊರಗ ಸಮುದಾಯದ ಅಧ್ಯಯನದಲ್ಲಿ ಕೊರಗರಲ್ಲಿ ಮದ್ಯಪಾನದಿಂದ ಹಾನಿಗಳಾಗುವ ಸಾಧ್ಯತೆಗಳು ಇತರರಿಗಿಂತ ಕಡಿಮೆ ಇರುವುದನ್ನು ವರದಿ ಮಾಡಲಾಗಿತ್ತು [Online Journal of Health and Allied Sciences, 2009;8(4).]



ಈ ಹಿನ್ನೆಲೆಯಲ್ಲಿ, ಕೊರಗರಿಗೆ ಬಾಧಿಸುವ ಎಲ್ಲಾ ಕಾಯಿಲೆಗಳಿಗೆ ಮದ್ಯಪಾನ ಮತ್ತು ಇತರ ದುಶ್ಚಟಗಳೇ ಕಾರಣ ಎಂದು ಆರೋಪಿಸುವ ಹಾಗೂ ಆ ಕಾರಣಕ್ಕೆ ಅವರಿಗೆ ನೀಡುವ ಸಕಲ ವೈದ್ಯಕೀಯ ಮರುಪಾವತಿಯನ್ನು ರದ್ದು ಪಡಿಸಿರುವುದು ಕೊರಗ ಸಮುದಾಯಕ್ಕೆ ಮಾಡಿದ ಪರಮ ಅನ್ಯಾಯವಾಗಿದೆ. ಅಷ್ಟೇ ಅಲ್ಲ, ಆ ರೀತಿಯ ಕೀಳುಮಟ್ಟದ ಆರೋಪ ಮಾಡಿರುವುದು ನಮ್ಮ ದೇಶದ ಅತಿ ಪ್ರಾಚೀನವಾದ, ಒಂದು ಕಾಲದಲ್ಲಿ ಈ ನಾಡನ್ನು ಆಳಿಕೊಂಡಿದ್ದ, ಈಗ ಅತಿ ಹಿಂದುಳಿದಿರುವ, ಅತಿ ಕಡಿಮೆ ಸದಸ್ಯರು ಉಳಿದುಕೊಂಡಿರುವ ಕೊರಗ ಸಮುದಾಯಕ್ಕೆ ಮಾಡಿರುವ ಮಹಾ ಅವಮಾನವೂ ಆಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.




ಆದ್ದರಿಂದ ಇಂಥ ಅಮಾನವೀಯವಾದ, ಅವಮಾನಕಾರಿಯಾದ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕು. ಈ ಆದೇಶದಲ್ಲಿ ನೀಡಿರುವ ಕಾರಣಗಳಿಗೆ ಕೊರಗ ಸಮುದಾಯದವರಿಗೆ ವೈದ್ಯಕೀಯ ಮರುಪಾವತಿ ಕೊಡುವುದಿಲ್ಲ ಎಂದಾದರೆ ಅವೇ ಕಾರಣಗಳಿಗಾಗಿ ಅಂಥ 'ದುಶ್ಚಟಗಳನ್ನು' ಹೊಂದಿರಬಹುದಾದ ಜನಪ್ರತಿನಿಧಿಗಳಿಗೂ, ಸಚಿವರಿಗೂ ಯಾವುದೇ ವೈದ್ಯಕೀಯ ಮರುಪಾವತಿಯನ್ನು ನೀಡಲಾಗದು ಎಂಬ ಆದೇಶವನ್ನು ಹೊರಡಿಸುವ ಧೈರ್ಯವು ಸರಕಾರಕ್ಕಿದೆಯೇ ಎಂದು ಪ್ರಶ್ನಿಸಬೇಕಾಗುತ್ತದೆ ಎಂದು ಅವರು ಸವಾಲು ಹಾಕಿದ್ದಾರೆ.

Ads on article

Advertise in articles 1

advertising articles 2

Advertise under the article