-->
1000938341
ಮಂಗಳೂರು: ಮೋದಿ ಕಾರ್ಯಕ್ರಮಕ್ಕೆ ಬಲವಂತವಾಗಿ ಜನರಿಗೆ ಆಹ್ವಾನ; ಖಾದರ್ ಆರೋಪ

ಮಂಗಳೂರು: ಮೋದಿ ಕಾರ್ಯಕ್ರಮಕ್ಕೆ ಬಲವಂತವಾಗಿ ಜನರಿಗೆ ಆಹ್ವಾನ; ಖಾದರ್ ಆರೋಪ

ಮಂಗಳೂರು: ಸೆ.2ರಂದು ಮಂಗಳೂರಿನಲ್ಲಿ ನಡೆಯುತ್ತಿರುವ ಮೋದಿ ಕಾರ್ಯಕ್ರಮಕ್ಕೆ ಬಲವಂತವಾಗಿ ಜನರಿಗೆ ಆಹ್ವಾನ ನೀಡಲಾಗುತ್ತಿದೆ. ಕಾರ್ಯಕ್ರಮ ನಡೆಯುವ ಮೈದಾನವು ಸೇರುವ ಜನತೆಗೆ ಸಾಕಾಗುತ್ತೋ ಇಲ್ಲವೋ ಎನ್ನುವ ಪ್ರಶ್ನೆ ಎದುರಾಗಿದೆ ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಆರೋಪ ಮಾಡಿದ್ದಾರೆ.

ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಅವರು, ಜನರು ಸೇರುವ ನಿರೀಕ್ಷೆ ಕಂಡಾಗ ಈಗ ಇರುವ ಮೈದಾನಕ್ಕಿಂತ ದೊಡ್ಡ ಸ್ಥಳ ಬೇಕೆಂದು ಕಾಣಿಸುತ್ತಿದೆ.‌ ಉಡುಪಿ ಹಾಗೂ ದ.ಕ.ಜಿಲ್ಲೆಯ ಎಲ್ಲಾ ಗ್ರಾಪಂ ಪಿಡಿಒಗಳಿಗೆ ಪ್ರತಿ ಗ್ರಾಮದಿಂದ 250 ಜನರನ್ನು ಕರೆತರಲು ಜಿಲ್ಲಾಡಳಿತ ನೊಟೀಸ್ ಕಳುಹಿಸಿದೆ. ಕಂದಾಯ ಇಲಾಖೆಯಿಂದ ವಿಎ ಸೇರಿದಂತೆ ಎಲ್ಲಾ ಅಧಿಕಾರಿಗಳು ಬರಬೇಕೆಂದು ಸೂಚನೆ ನೀಡಲಾಗಿದೆ. ಗ್ರಾಪಂ ಕಾರ್ಯದರ್ಶಿ, ಲೈನ್ ಮ್ಯಾನ್, ನೀರು ಬಿಡುವವನಿಗೂ ನೊಟೀಸ್ ಹೋಗಿದೆ ಎಂದು ಹೇಳಿದರು.

ಶಾಲಾ ಕಾಲೇಜುಗಳಿಗೆ ರಜೆ ನೀಡಿ ಎಲ್ಲಾ ಮಕ್ಕಳೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂಬ ಸೂಚನೆ ನೀಡಲಾಗಿದೆ. ಎಲ್ಲಾ ಬ್ಯಾಂಕ್ ಗಳಿಗೆ ಸೂಚನೆ ನೀಡಿ, ಬ್ಯಾಂಕ್ ಸವಲತ್ತು ಪಡೆದವರನ್ನು ಕರೆತರಬೇಕೆಂದು ಸೂಚಿಸಲಾಗಿದೆ. ಜಿಲ್ಲಾಧಿಕಾರಿಯವರು ಸೂಚನೆ ನೀಡಿದರೆ ಕೆಳ ಅಧಿಕಾರಿಗಳು ಜನರನ್ನು ಕರೆತರಲೇಬೇಕಾಗುತ್ತದೆ‌. ಇಲ್ಲವಾದಲ್ಲಿ ಅಧಿಕಾರಿಗಳು ಅವರ ಮನೆಯವರನ್ನು ಆದರೂ ಕರೆತರಬೇಕು. ಒಂದು ವಾರದಿಂದ ಎಲ್ಲಾ ಅಧಿಕಾರಿಗಳು ಬ್ಯುಸಿ ಇದ್ದಾರೆ. ಎಲ್ಲಾ ಸಿಕ್ಕ‌ಸಿಕ್ಕ ಮೀನುಗಾರರಿಗೂ ಕಿಸಾನ್ ಕಾರ್ಡ್ ನೀಡಿ ಕಾರ್ಯಕ್ರಮಕ್ಕೆ ಬರಲು ಸೂಚಿಸಿದ್ದಾರೆ. ಇಷ್ಟೆಲ್ಲಾ ಸೂಚನೆ ನೀಡಿದ ಬಳಿಕ ಜನಸಾಗರವೇ ಬರಲಿದೆ. ಆದ್ದರಿಂದ ಜನರಿಗೆ ಯಾವುದೇ ತೊಂದರೆ ಆಗದಂತೇ ಜಿಲ್ಲಾಡಳಿತ ಕ್ರಮ ಜರುಗಿಸಬೇಕೆಂದು ಯುಟಿ ಖಾದರ್ ಹೇಳಿದರು.

Ads on article

Advertise in articles 1

advertising articles 2

Advertise under the article